ಬೆಂಗಳೂರು: ಸಮಗ್ರ ಮರಳು ನೀತಿ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ರಾಜ್ಯದಾದ್ಯಂತ ನಡೆಸುತ್ತಿರುವ ಮುಷ್ಕರ ಶನಿವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು, ಲಾರಿ ಮಾಲೀಕರ ಸಮಸ್ಯೆಗಳನ್ನು ಪರಿಶೀಲಿಸಲು ಸರ್ಕಾರ ಸೋಮವಾರದವರೆಗೆ (ಜು.15) ಕಾಲಾವಕಾಶ ಕೋರಿದೆ.
`ಸರ್ಕಾರದೊಂದಿಗೆ ಶನಿವಾರ ಎರಡನೇ ಸುತ್ತಿನ ಮಾತುಕತೆ ನಡೆಸಲಾಯಿತು. ಈ ವೇಳೆ ಲಾರಿ ಮಾಲೀಕರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ' ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ.
ಇದೇ ವೇಳೆ ಮರಳು ದೊರೆಯುವ ಜಾಗಗಳ ಬಗ್ಗೆ ಚರ್ಚೆ ಆದಾಗ, `1,600 ಮರಳು ದೊರೆಯುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸದ್ಯ 600 ಜಾಗದಲ್ಲಿ ಮರಳು ಕೊಡಲಾಗುತ್ತಿದೆ' ಎಂದು ಸಚಿವರೊಬ್ಬರು ಹೇಳಿದರು. ಆದರೆ, ಕೇವಲ ಒಂಬತ್ತು ಪ್ರದೇಶಗಳಿಂದ ಮಾತ್ರ ಮರಳು ನೀಡಲಾಗುತ್ತಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಲಾಯಿತು.