ಕೆ.ಆರ್.ಪುರ: ಮಹದೇವಪುರ ವಲಯದ ಬಿಬಿಎಂಪಿ ವಾರ್ಡ್ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಕೊರೊನಾ ನಿಯಂತ್ರಣ ಮಾಡಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಕೋವಿಡ್ ವಲಯ ಉಸ್ತುವಾರಿ ಬೈರತಿ ಬಸವರಾಜ ಹೇಳಿದರು.
ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
’ಖಾಸಗಿ ಆಸ್ಪತ್ರೆಗಳು ಶೇ 50 ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ನೀಡತಕ್ಕದು. ಹಾಸಿಗೆ ನೀಡದ ಆಸ್ಪತ್ರೆಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು. ಮಹದೇವಪುರ ವಲಯದಲ್ಲಿ 1800 ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕೆಂದು ಆಸ್ಪತ್ರೆಗಳಿಗೆ ಮನವಿ ಮಾಡಲಾಗಿದೆ‘ ಎಂದು ಹೇಳಿದರು.
ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ಮಹದೇವಪುರ ವಲಯ ಕೋವಿಡ್ ಸಂಯೋಜಕಿ ಮಂಜುಳಾ, ಡಿಎಚ್ಒ ಡಾ.ಸುರೇಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ, ಡಿಸಿಪಿ ದೇವರಾಜ್ ಇದ್ದರು.