ಶ್ರೀನಗರ: ಪಾಕಿಸ್ತಾನಿ ಪಡೆಯು ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸಿದ ಶೆಲ್ ದಾಳಿಯಲ್ಲಿ ಒಬ್ಬ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ.
ಹುತಾತ್ಮ ಯೋಧನನ್ನು ಮನದೀಪ್ ಸಿಂಗ್ (23) ಎಂದು ಗುರುತಿಸಲಾಗಿದೆ. ಪಂಜಾಬಿನ ಸಿಂಗನೂರು ಜಿಲ್ಲೆಯ ಅಲಮ್ಪುರ ಗ್ರಾಮದವರು. ಈ ದಾಳಿ ಬೆಳಗ್ಗೆ 8.20 ರಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಆರ್ಎಸ್ಪುರ, ಅಕನೂರಿನಲ್ಲಿಯೂ ದಾಳಿ ನಡೆದಿದ್ದು, ಈ ವೇಳೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ, ಒಬ್ಬ ಬಿಎಸ್ಎಫ್ ಯೋಧ ಗಾಯಗೊಂಡಿದ್ದಾರೆ.
ಪಾಕಿಸ್ತಾನ ಸೇನೆಯು ಚೆನಾಬ್ ನದಿ ತೀರದ ಹಾಗೂ ಆರ್ಎಸ್ ಪುರ ಗ್ರಾಮದ ನಾಗರಿಕರನ್ನು ಗುರಿಯಾಗಿಸಿಕೊಂಡು ಇಡೀ ರಾತ್ರಿ ದಾಳಿ ನಡೆಸಿದೆ. ಅಲ್ಲದೇ ಅರ್ನಿಯಾ, ರಾಮಘರ್, ಸಾಂಬಾ ಹಿರಾನಗರ ವಲಯದಲ್ಲಿ ನಸುಕಿನ 5ರವರೆಗೂ ದಾಳಿ ಮುಂದುವರಿದಿತ್ತು ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.