ದಾಬಸ್ಪೇಟೆ: ನೆಲಮಂಗಲದ ಸೋಂಪುರ ಹೋಬಳಿಯ ನರಸೀಪುರದ ಶುದ್ಧ ಕುಡಿಯುವ ನೀರಿನ ಘಟಕ ಮತ್ತೆ ಕೆಟ್ಟು ಹೋಗಿದೆ.
ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದು ಇದೊಂದೇ ಘಟಕ. ಈ ಘಟಕ ಪ್ರಾರಂಭವಾಗಿ ವರ್ಷವೂ ಆಗಿಲ್ಲ. ಆಗಲೇ ಐದು ಬಾರಿ ದುರಸ್ತಿಗೊಂಡಿದೆ. ಕುಡಿಯುವ ನೀರಿಗಾಗಿ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಈ ಭಾಗದಲ್ಲಿ ಆತ್ಮರಾಮ ಸ್ವಾಮಿ ಜಾತ್ರೆ ಆರಂಭವಾಗಿದೆ. ಕುಡಿಯುವ ನೀರಿನ ಅವಶ್ಯಕತೆ ಹಿಂದೆಗಿಂತಲೂ ಈಗ ಹೆಚ್ಚಾಗಿದೆ. ₹5 ಪಾವತಿಸಿ 20 ಲೀಟರ್ ಪಡೆಯುತ್ತಿದ್ದೆವು. ಆದರೆ, ಈಗ ₹ 25 ಪಾವತಿಸಿ 20 ಲೀಟರ್ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪದೇಪದೇ ಕೆಟ್ಟು ಹೋಗುವ ಇಂಥ ಘಟಕ ಸ್ಥಾಪಿಸಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಸ್ಥಳೀಯ ನಿವಾಸಿ ರವೀಶ್, ನೀರು ಶುದ್ಧೀಕರಿಸುವ ಯಂತ್ರವನ್ನು ಕೂಡಲೇ ಬದಲಿಸಬೇಕು ಎಂದು ಒತ್ತಾಯಿಸಿದರು.
ಘಟಕಕ್ಕೆ ನೀರು ಪೂರೈಸುವ ಕೊಳವೆ ಬಾವಿಯ ಪಂಪ್ಸೆಟ್ ಸಹ ಕೆಟ್ಟು ನಿಂತಿತ್ತು. ಅದನ್ನು ದುರಸ್ತಿಗೊಳಿಸಿದ ಬಳಿಕ ಘಟಕ ಕೆಟ್ಟಿದೆ. ದುರಸ್ತಿಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮುಂದಾಗಿಲ್ಲ ಎಂದು ಉಮಾದೇವಿ ಅಸಮಾಧಾನ ವ್ಯಕ್ತಪಡಿಸಿದರು.