ಬೆಂಗಳೂರು: ದೇವನಗುಂದಿಯ ತೈಲ ಹಾಗೂ ಅಡುಗೆ ಅನಿಲ ದಾಸ್ತಾನು ಘಟಕದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದ ದುರಸ್ತಿಗೆ ಒತ್ತಾಯಿಸಿ ಟ್ಯಾಂಕರ್ ಚಾಲಕರು ಹಾಗೂ ಸಹಾಯಕರು ನಡೆಸುತ್ತಿದ್ದ ಧರಣಿ ಭಾನುವಾರ ಅಂತ್ಯವಾಯಿತು.
ತೈಲ ಸಾಗಣೆಯನ್ನು ಶನಿವಾರ ಬಂದ್ ಮಾಡಿದ್ದ ಚಾಲಕರು, ಟ್ಯಾಂಕರ್ಗಳನ್ನು ನಿಲ್ಲಿಸಿ ಧರಣಿ ಆರಂಭಿಸಿದ್ದರು. ಇದರಿಂದ ನಗರಕ್ಕೆ ತೈಲ ಪೂರೈಕೆ ಆಗಿರಲಿಲ್ಲ.
ಭಾನುವಾರ ಬೆಳಿಗ್ಗೆ ಧರಣಿ ಸ್ಥಳಕ್ಕೆ ಬಂದಿದ್ದ ಲೋಕೋಪಯೋಗಿ ಅಧಿಕಾರಿಗಳು, ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಧರಣಿ ಹಿಂಪಡೆಯಲಾಯಿತು.
‘ಜೆಸಿಬಿ ಯಂತ್ರದ ಸಮೇತ ಲೋಕೋಪಯೋಗಿ ಅಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆ ದುರಸ್ತಿ ಆರಂಭಿಸಿದ್ದಾರೆ. ಕಾಮಗಾರಿಯು ಕೆಲವೇ ದಿನಗಳಲ್ಲಿ ಮುಕ್ತಾಯವಾಗುವ ವಿಶ್ವಾಸವಿದೆ. ಹೀಗಾಗಿ, ಧರಣಿ ಕೈಬಿಟ್ಟಿದ್ದೇವೆ’ ಎಂದು ತೈಲ ಪೂರೈಕೆ ಟ್ಯಾಂಕರ್ಗಳ ಚಾಲಕರ ಸಂಘದ ಅಧ್ಯಕ್ಷ ಶ್ರೀರಾಮ್ ‘ಪ್ರಜಾವಾಣಿ’ಗೆ ತಿಳಿಸಿದರು.