ಬೆಂಗಳೂರು: ‘ಅಧಿಕಾರ ಇದ್ದಾಗ ಪಕ್ಕದಲ್ಲಿ ಜನರು ಇರುತ್ತಾರೆ. ಅಧಿಕಾರ ಇಲ್ಲದಾಗಲೂ ಜನರನ್ನು ತನ್ನತ್ತ ಸೆಳೆಯುವವನೇ ನಿಜವಾದ ನಾಯಕ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಬುಧವಾರ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಸಮುದಾಯದ ಸಚಿವರು, ಶಾಸಕರನ್ನು ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಜಾತಿ ಸಂಘರ್ಷಕ್ಕೆ ಅವಕಾಶ ಕೊಡದೇ ಧರ್ಮ ಸಂಸ್ಕೃತಿ, ಆದರ್ಶಗಳನ್ನು ಎತ್ತಿ ಹಿಡಿಯಬೇಕು. ಸಕಲರ ಶ್ರೇಯಸ್ಸನ್ನು ಬಯಸುವ ವೀರಶೈವ ಧರ್ಮವನ್ನು ಪುನರುತ್ಥಾನಗೊಳಿಸಬೇಕು ಎಂದು ಕಿವಿಮಾತು ಹೇಳಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ, ಸ್ವಾಮೀಜಿಗಳು, ವೀರಶೈವ ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರು ಇದ್ದರು.
‘ವೀರಶೈವ ಲಿಂಗಾಯತ ಸಮುದಾಯಕ್ಕೆ ಸವಾಲುಗಳನ್ನು ಎದುರಿಸುವ ಶಕ್ತಿ ಇದೆ. ನಮಗೆ ಚರಿತ್ರೆ ಇದೆ ಚಾರಿತ್ರ್ಯ ಬೇಕಿದೆ. ಆಚಾರ್ಯರಿದ್ದಾರೆ ಆಚರಣೆ ಬೇಕಿದೆ.
-ಬಸವರಾಜ ಬೊಮ್ಮಾಯಿ ಶಾಸಕ
ವೀರಶೈವರು ಲಿಂಗಾಯತರು ಕೂಡಿ ಹೋರಾಟ ಮಾಡಿ ಯುವ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಾತಿನಿಧ್ಮ ಸಿಗುವಂತೆ ಮಾಡಬೇಕಾಗಿದೆ.