ಬೆಂಗಳೂರು: ಸಾಕು ನಾಯಿ ಬೊಗಳಿದ್ದ ವಿಚಾರಕ್ಕೆ ಗಲಾಟೆ ಮಾಡಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಶಂಕರ್ ಎಂಬುವವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಬಿಹಾರದ ಶಂಕರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಟೈಲ್ಸ್ ಜೋಡಿಸುವ ಕೆಲಸ ಮಾಡುತ್ತಿದ್ದ. ಯುವತಿ ನೀಡಿದ್ದ ದೂರು ಆಧರಿಸಿ ಶಂಕರ್ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಪೋಷಕರ ಜೊತೆ ಯುವತಿ ವಾಸವಿದ್ದಾರೆ. ಅವರ ಮನೆ ಸಮೀಪದಲ್ಲೇ ಆರೋಪಿ ಶಂಕರ್ ನೆಲೆಸಿದ್ದಾನೆ. ಮಾರ್ಚ್ 7ರಂದು ರಾತ್ರಿ ಶಂಕರ್ ಸ್ನೇಹಿತರ ಜೊತೆ ತನ್ನ ಮನೆಗೆ ಬಂದಿದ್ದ. ಇದೇ ಸಂದರ್ಭದಲ್ಲಿ ಯುವತಿ ಮನೆಯ ಸಾಕು ನಾಯಿ ಬೊಗಳಿತ್ತು.’
‘ಸಾಕು ನಾಯಿಗೆ ಹೊಡೆಯಲು ಹೋಗಿದ್ದ ಶಂಕರ್, ಅದನ್ನು ಪ್ರಶ್ನಿಸಿದ್ದ ಯುವತಿಯ ತಂದೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದ. ತಂದೆಯ ರಕ್ಷಣೆಗೆ ಹೋಗಿದ್ದ ಯುವತಿಯನ್ನು ಎಳೆದಾಡಿ ದೌರ್ಜನ್ಯ ಎಸಗಿದ್ದನೆಂದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.