ಒತ್ತುವರಿಯಲ್ಲಿ ಅರವಿಂದ ಲಿಂಬಾವಳಿ ಭಾಗಿ: ಎಎಪಿ
ಬೆಂಗಳೂರು: ‘ಮಹದೇವಪುರ ವ್ಯಾಪ್ತಿಯಲ್ಲಿ ಗೋದ್ರೆಜ್ ಪ್ರಾಪರ್ಟೀಸ್ ಒತ್ತುವರಿ ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರ ನೇರ ಕೈವಾಡವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆಗ್ರಹಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಗೋದ್ರೆಜ್ ಪ್ರಾಪರ್ಟೀಸ್ ಹಾಗೂ ವಂಡರ್ ಪ್ರಾಜೆಕ್ಟ್ ಡೆವೆಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ಬಹುಮಹಡಿ ಕಟ್ಟಡವನ್ನು ಕೆಡವಿ, ₹31 ಕೋಟಿ ದಂಡ ಕಟ್ಟಲು ಆದೇಶಿಸಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶ ಸ್ವಾಗತಾರ್ಹ. ಆದರೆ, ಸ್ಥಳೀಯ ಶಾಸಕರ ಅರಿವಿಗೆ ಬಾರದೆ ಇಷ್ಟೊಂದು ದೊಡ್ಡ ಅಕ್ರಮ ನಡೆದಿರಲು ಸಾಧ್ಯವಿಲ್ಲ’ ಎಂದರು.
‘ಅರವಿಂದ ಲಿಂಬಾವಳಿ ಅವರು ಚುನಾವಣೆಗಳಲ್ಲಿ ಗೆಲ್ಲಲು ಈ ಪ್ರಭಾವಿ ಕಾರ್ಪೊರೇಟ್ ಕಂಪನಿಗಳ ಬೆಂಗಾವಲಿದೆ. ಅದಕ್ಕಾಗಿ ಇಂತಹ ಅವೈಜ್ಞಾನಿಕ ಯೋಜನೆಗಳಿಗೆ ಅನುಮತಿ ನೀಡಿದ್ದಾರೆ’ ಎಂದು ದೂರಿದರು.
‘ಮಹದೇವಪುರ ಕ್ಷೇತ್ರದಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ಬಗ್ಗೆ ಸರ್ಕಾರ ಕೂಡಲೇ ಪರಿಶೀಲನೆ ನಡೆಸಬೇಕು. ಅಕ್ರಮಗಳಲ್ಲಿ ಅರವಿಂದ ಲಿಂಬಾವಳಿ ಅವರ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಬೇಕು. ಈ ಯೋಜನೆಗೆ ಸಹಕರಿಸಿ, ಭ್ರಷ್ಟಾಚಾರ ಎಸಗಿರುವ ಬಿಬಿಎಂಪಿ ಮತ್ತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ಸಂಬಂಧ ಶಾಸಕ ಅರವಿಂದ ಲಿಂಬಾವಳಿ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.