ಬೆಂಗಳೂರು: ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಸದಸ್ಯರುಮೌರ್ಯ ವೃತ್ತದಲ್ಲಿ ಸೌದೆ ಒಲೆಯಲ್ಲಿ ಟೀ ಮಾಡಿ ಹಂಚುವ ಮೂಲಕ ಎಲ್ಪಿಜಿ ಸಿಲಿಂಡರ್ ದರ ಹೆಚ್ಚಳದ ವಿರುದ್ದಶನಿವಾರ ಪ್ರತಿಭಟನೆ ನಡೆಸಿದರು.
ಪಕ್ಷದ ಮಹಿಳಾ ಘಟಕದ ಕಾರ್ಯಕರ್ತರು, ‘ಸೌದೆಗಾದ್ರೂ ಸಬ್ಸಿಡಿ ಕೊಡು ಗುರು’ ಎಂಬ ಘೋಷಣೆಗಳನ್ನು ಕೂಗುತ್ತಾ ಎಲ್ಪಿಜಿ ದರ ಹೆಚ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ,‘ಎಲ್ಪಿಜಿ ಸಿಲಿಂಡರ್ಗಳ ದರವನ್ನು ಡಿಸೆಂಬರ್ನಲ್ಲೇ ಎರಡು ಬಾರಿ ಹೆಚ್ಚಳ ಮಾಡಿ, ಜನರ ಸುಲಿಗೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ದೋಚುತ್ತಿದೆ’ ಎಂದು ಆರೋಪಿಸಿದರು.
‘ಲಾಕ್ಡೌನ್ ನೆಪದಲ್ಲಿ ಸಬ್ಸಿಡಿ ನಿಲ್ಲಿಸಿ, ₹20 ಸಾವಿರ ಕೋಟಿ ಉಳಿತಾಯ ಮಾಡಿದೆ. ಆದರೂ ದರ ಹೆಚ್ಚಳ ಏಕೆ? ಮಾರುಕಟ್ಟೆಯಲ್ಲಿ ಸೌದೆಯ ಬೆಲೆಯೂ ಗಗನಕ್ಕೇರಿದೆ. ಹಾಗಾಗಿ, ಸೌದೆಗಾದರೂ ಸಬ್ಸಿಡಿ ಕೊಟ್ಟರೆ, ಎರಡು ಹೊತ್ತು ಊಟ ಮಾಡಿ ಜೀವ ಉಳಿಸಿಕೊಳ್ಳುತ್ತೇವೆ’ ಎಂದು ವ್ಯಂಗ್ಯವಾಡಿದರು.
‘ಒಲೆಯಲ್ಲಿ ಅಡುಗೆ ಮಾಡುವುದರಿಂದ ಮಾಲಿನ್ಯ ತಪ್ಪಿಸಬಹುದು ಎಂದುಕೇಂದ್ರ ಸರ್ಕಾರ ಎಲ್ಪಿಸಿ ಸಂಪರ್ಕ ಕಲ್ಪಿಸಿದೆ. ಈಗ ದರ ಏರಿಸಿ,ಸುಲಿಗೆ ಮಾಡುತ್ತಿದೆ. ದರ ಹೆಚ್ಚಳ ನಿರ್ಧಾರ ಹಿಂಪಡೆಯದಿದ್ದರೆ, ಸೌದೆಯನ್ನು ಪ್ರಧಾನಿ ಕಚೇರಿಗೆ ಪಾರ್ಸೆಲ್ ಮಾಡಲಾಗುವುದು’ ಎಂದರು.
ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ಉಪಾಧ್ಯಕ್ಷೆ ಮಾಯಾ ಪ್ರದೀಪ್, ವೈದ್ಯೆ ಪೂರ್ಣಿಮಾ ನಾಯ್ಡು, ಪ್ರತಿಮಾ ಮಲಾನಿ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.