ಬೆಂಗಳೂರು: ಬಾನೆಟ್ ಮೇಲೆ ಎರಗಿದ್ದ ಯುವಕರೊಬ್ಬರನ್ನು ಕಾರಿನ ಮೇಲೆ 4 ಕಿ.ಮೀ. ವರೆಗೂ ಹೊತ್ತೊಯ್ದು ಕೊಲೆಗೆ ಯತ್ನಿಸಿದ ಹಾಗೂ ಕಾರು ಚಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದ್ದ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
‘ಶುಕ್ರವಾರ (ಜ. 20) ಬೆಳಿಗ್ಗೆ ನಡೆದಿರುವ ಘಟನೆ ಸಂಬಂಧ ದರ್ಶನ್ ಹಾಗೂ ಪ್ರಿಯಾಂಕಾ ಅವರ ಪತಿ ಪ್ರಮೋದ್, ದೂರು– ಪ್ರತಿದೂರು ನೀಡಿದ್ದರು. ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಪ್ರಿಯಾಂಕಾ, ದರ್ಶನ್ ಸೇರಿ ಐವರನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.
‘ಐವರನ್ನೂ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಎಲ್ಲರನ್ನೂ ಫೆ. 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ತಿಳಿಸಿದರು.