ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿಗೆ ನುಗ್ಗಿದ ಟಿಪ್ಪರ್; ಚಾಲಕ ಸಾವು

ವಿದ್ಯಾರಣ್ಯಪುರ ಸಮೀಪದ ದೊಡ್ಡ ಬೊಮ್ಮಸಂದ್ರದಲ್ಲಿ ನಡೆದ ದುರ್ಘಟನೆ
Last Updated 24 ಜನವರಿ 2020, 23:21 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರಣ್ಯ‍ಪುರ ಸಮೀಪದ ದೊಡ್ಡ ಬೊಮ್ಮಸಂದ್ರದಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ಟಿಪ್ಪರ್ ನುಗ್ಗಿ ಅವಘಡ ಸಂಭವಿಸಿದ್ದು, ಚಾಲಕ ತೇಜಸ್‌ (31) ಎಂಬುವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಶುಕ್ರವಾರ ನಸುಕಿನಲ್ಲಿ 4.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕ್ಲೀನರ್‌ ಭೂಪಸಂದ್ರದ ಮಲ್ಲಣ್ಣ ಎಂಬುವರಿಗೂ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮತ್ತಿಕೆರೆ ಬಳಿ ಕಟ್ಟಡವೊಂದನ್ನು ರಾತ್ರಿ ತೆರವು ಮಾಡಲಾಗುತ್ತಿತ್ತು. ಅದರ ಅವಶೇಷ ತುಂಬಿಕೊಂಡಿದ್ದ ಟಿಪ್ಪರ್ ಲಕ್ಷ್ಮಿಪುರ ಕ್ರಾಸ್‌ನತ್ತ ಹೊರಟಿತ್ತು. ಚಾಲಕ ತೇಜಸ್ ನಿದ್ದೆಗೆ ಜಾರಿದ್ದರು. ಕ್ಲೀನರ್ ಮಲ್ಲಣ್ಣ ಅವರೇ ಟಿಪ್ಪರ್ಚಲಾಯಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮಲ್ಲಣ್ಣ ಅತಿ ವೇಗವಾಗಿ ಹಾಗೂ ಅಡ್ಡಾದಿಡ್ಡಿಯಾಗಿ ಟಿಪ್ಪರ್ ಚಲಾಯಿಸಿದ್ದರು. ದೊಡ್ಡ ಬೊಮ್ಮಸಂದ್ರದ ರಸ್ತೆ ಪಕ್ಕವಿರುವ ನಾರಾಯಣಸ್ವಾಮಿ ಎಂಬುವರ ಬಟ್ಟೆ ಅಂಗಡಿಗೆ ಟಿಪ್ಪರ್ ನುಗ್ಗಿಸಿದ್ದರು. ಅದರಿಂದಾಗಿ ಅಂಗಡಿ ಗೋಡೆ ಕುಸಿದು ಬಿದ್ದು, ಟಿಪ್ಪರ್ ಮುಂಭಾಗ ಜಖಂಗೊಂಡಿತ್ತು. ಲಾರಿಯಲ್ಲೇ ಸಿಲುಕಿ ತೇಜಸ್ ಮೃತಪಟ್ಟಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು 2 ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಮೃತದೇಹ ಹೊರಗೆ ತೆಗೆದರು.ತೀವ್ರ ಗಾಯಗೊಂಡು ನರಳಾಡುತ್ತಿದ್ದ ಕ್ಲೀನರ್ ಮಲ್ಲಣ್ಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕ್ಲೀನರ್ ಮಲ್ಲಣ್ಣ ಅವರ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಅಂಗಡಿ ಬಾಗಿಲು ಬಂದ್ ಮಾಡಲಾಗಿತ್ತು. ನಸುಕಿನಲ್ಲಿ ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ಜೋರಾದ ಶಬ್ದ ಕೇಳುತ್ತಿದ್ದಂತೆ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT