ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ದಿನಪತ್ರಿಕೆ ಹಂಚುವ ಯುವಕ ಎಚ್.ಸಿ.ಯೋಗೇಶ್ (22) ಎಂಬುವರು ಮೃತಪಟ್ಟಿದ್ದಾರೆ.
‘ಲಗ್ಗೆರೆಯ ಲಕ್ಷ್ಮಿದೇವಿನಗರ ನಿವಾಸಿಯಾಗಿದ್ದ ಯೋಗೇಶ್, ದಿನಪತ್ರಿಕೆ ಹಂಚಲು ಬುಧವಾರ (ಮೇ 20) ಬೆಳಿಗ್ಗೆ ಮನೆಯಿಂದ ಬಂದಿದ್ದರು. ಪತ್ರಿಕೆಗಳನ್ನು ತೆಗೆದುಕೊಂಡು ಹಂಚಲು ಹೊರಟಿದ್ದ ವೇಳೆಯಲ್ಲೇ ಅಪಘಾತ ಸಂಭವಿಸಿತ್ತು’ ಎಂದು ರಾಜಾಜಿನಗರ ಸಂಚಾರ ಪೊಲೀಸರು ಹೇಳಿದರು.
‘ಶಶಿಕರ್ ಗಾರ್ಮೆಂಟ್ಸ್ ಕಾರ್ಖಾನೆ ಎದುರು ಯೋಗೇಶ್ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ, ಎದುರಿಗೆ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು. ಯೋಗೇಶ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.’
‘ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಮಧ್ಯಾಹ್ನ ಯೋಗೇಶ್ ಅಸುನೀಗಿದರು.ಅವರಿಗೆ ತಂದೆ-ತಾಯಿ, ಸಹೋದರ-ಸಹೋದರಿ ಇದ್ದಾರೆ. ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.