ಬೆಂಗಳೂರು: ‘ಚಿತ್ರ ಕಲಾವಿದರಿಗೆ ಅವಕಾಶಗಳು ಸಿಗುತ್ತಿಲ್ಲ. ಅದರಲ್ಲೂ ತಳ ಸಮುದಾಯಗಳ ಕಲಾವಿದರು ಅವಕಾಶ ವಂಚಿತರಾಗುತ್ತಿದ್ದು, ಅವರನ್ನು ತರಬೇತಿಗಳ ಮೂಲಕಮುಖ್ಯವಾಹಿನಿಗೆ ಕರೆತರಬೇಕು’ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಹೇಳಿದರು.
ಸರ್ಕಾರದ ವಿಶೇಷ ಘಟಕ ಯೋಜನೆಯಡಿ ವಿದ್ಯಾರ್ಥಿ ಹಾಗೂ ಯುವ ಕಲಾವಿದರಿಗೆ ತರಬೇತಿ ನೀಡುವ ಸಲುವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಲಾವಿದರು ಎಷ್ಟು ಕಲಿತರೂ ಸಾಲದು. ಹಿರಿಯರಿಂದ ಪಡೆಯುವ ಮಾರ್ಗದರ್ಶನ ಅವರ ನೈಪುಣ್ಯವನ್ನು ಹೆಚ್ಚಿಸುತ್ತದೆ. ಈ ಉದ್ದೇಶದಿಂದ ಅಕಾಡೆಮಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಒಗ್ಗೂಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಕಲಾವಿದರಿಗೆ ಕಾರ್ಯಾಗಾರ ಆಯೋಜಿಸುತ್ತಿದೆ’ ಎಂದರು.
‘ಕಲೆ ಪ್ರತಿಯೊಬ್ಬರಲ್ಲಿರುವ ಸ್ವಾಭಾವಿಕ ಅಂಶ. ಅದನ್ನು ಗುರುತಿಸಿ, ವ್ಯಕ್ತಪಡಿಸುವುದು ಕೆಲವರಿಂದ ಮಾತ್ರ ಸಾಧ್ಯ. ಅಂಗನವಾಡಿಯಲ್ಲಿ ಚಿತ್ರಕಲೆ ಮೂಲಕ ಅಕ್ಷರ ಹೇಳಿಕೊಡುವ ಯೋಜನೆ ಜಾರಿಯಲ್ಲಿದ್ದು, ಸರ್ಕಾರ ಅಗತ್ಯ ನೆರವು ನೀಡಲಿದೆ’ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.