ಬೆಂಗಳೂರು: ನನ್ನ ಕೊಲೆಗೆ ಕಾಂಗ್ರೆಸ್ ಮುಖಂಡರು ಎಂ.ಎನ್.ಗೋಪಾಲಕೃಷ್ಣ ನೇತೃತ್ವದಲ್ಲಿ ಸಂಚು ನಡೆಸಿದ್ದಾರೆ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾಡಿರುವ ಆರೋಪವನ್ನು ಗೋಪಾಲಕೃಷ್ಣ ತಳ್ಳಿ ಹಾಕಿದ್ದಾರೆ. ಅಲ್ಲದೇ ಈ ಬಗ್ಗೆಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
‘ವಿಡಿಯೊದಲ್ಲಿರುವ ಶೇಕಡ 80ರಷ್ಟು ಭಾಗ ನಕಲಿ. ನನ್ನ ವಿರುದ್ಧ ಆರೋಪ ಮಾಡಿರುವುದರ ಹಿಂದೆ ಶಾಸಕ ಎಸ್.ಆರ್. ವಿಶ್ವನಾಥ್ ಷಡ್ಯಂತ್ರವಿದೆ. ಕುಳ್ಳ ದೇವರಾಜ್ ಮತ್ತು ವಿಶ್ವನಾಥ್ ಮೊಬೈಲ್ ದೂರವಾಣಿಗಳ ಮೂರು ತಿಂಗಳ ಕರೆ ವಿವರ ಪರಿಶೀಲಿಸಿದರೆ ಸತ್ಯ ಬಯಲಾಗುತ್ತದೆ’ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಎನ್.ಗೋಪಾಲಕೃಷ್ಣ ಆರೋಪಿಸಿದರು.
‘ಎಂಟು ಎಕರೆ ಜಮೀನಿನ ವಿಷಯದಲ್ಲಿ ಶಾಸಕರಿಂದ ತೊಂದರೆ ಆಗುತ್ತಿದೆ ಎಂದು ದೇವರಾಜ್ ನನ್ನ ಬಳಿ ಬಂದಿದ್ದ. ಆಗ, ₹ 5 ಲಕ್ಷ ತಂದಿದ್ದು, ಅದರಲ್ಲಿ ₹ 2 ಲಕ್ಷ ವಾಪಸ್ ತೆಗೆದುಕೊಂಡು ಹೋಗಿದ್ದ. ದೇವರಾಜ್ ಶಾಸಕರ ಬಲಗೈ ಬಂಟ. ಅವರ ಯೋಜನೆಯಂತೆ ಎಲ್ಲವೂ ನಡೆದಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನಾನು ಯಾರ ಕೊಲೆಗೂ ಸುಪಾರಿ ನೀಡಿಲ್ಲ. ಎಲ್ಲ ಆರೋಪಗಳೂ ಸುಳ್ಳು. ದೇವರಾಜ್ ವಿರುದ್ಧ ದೂರು ದಾಖಲಿಸುತ್ತೇನೆ’ ಎಂದರು.
‘ರೌಡಿಗಳೆಲ್ಲ ವಿಶ್ವನಾಥ್ ಜತೆಗಿದ್ದಾರೆ’
‘ಬೆಂಗಳೂರಿನ ಎಲ್ಲ ರೌಡಿಗಳೂ ಶಾಸಕ ಎಸ್.ಆರ್. ವಿಶ್ವನಾಥ್ ಜತೆಗೇ ಇದ್ದಾರೆ. ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡುವವರಿಗೆ ಈ ರೀತಿಯಲ್ಲಿ ಒತ್ತಡ ಹಾಕಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
‘ಚುನಾವಣೆ ಕಾರಣದಿಂದ ಬೆದರಿಸಲು ಈ ರೀತಿಯ ಆರೋಪ ಮಾಡಲಾಗಿದೆ. ತಪ್ಪು ಮಾಡಿದವರನ್ನು ನಾವು ರಕ್ಷಿಸುವುದಿಲ್ಲ. ತಪ್ಪು ಮಾಡಿದವರನ್ನು ವಿಚಾರಣೆ ಮಾಡಲಿ. ಸಾಬೀತಾದರೆ ಶಿಕ್ಷೆ ನೀಡಲಿ’ ಎಂದರು.