ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರದ ಥಣಿಸಂದ್ರ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಸೇನೆಯ ಆಶ್ರಯದಲ್ಲಿ 11ನೇ ವರ್ಷದ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ 13 ಮಂದಿ ಆಟೊ ಚಾಲಕರಿಗೆ ಆಟೊ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಬಿಬಿಎಂಪಿ ಸದಸ್ಯೆ ಮಮತಾ ವೆಂಕಟೇಶ್, ‘ಈ ಭಾಗದಲ್ಲಿ ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದು, ಪ್ರತಿನಿತ್ಯದ ಜೀವನನಿರ್ವಹಣೆಗೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಅವರ ಜೀವನೋಪಾಯಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಆಟೊಗಳನ್ನು ವಿತರಿಸಲಾಗಿದೆ’ ಎಂದರು.
ಪ್ರತಿ ಆಟೊಗೆ ₹ 80 ಸಾವಿರ ಸಹಾಯಧನ ನೀಡಲಾಗಿದೆ. ಫಲಾನುಭವಿಗಳು ಉಳಿದ ಹಣವನ್ನು ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಬೇಕಾಗಿದೆ ಎಂದರು. ಕಾಂಗ್ರೆಸ್ ಮುಖಂಡ ಪಳನಿ ವೆಂಕಟೇಶ್, ಸಂಘದ ಅಧ್ಯಕ್ಷ ಸಿ.ಎಂ.ಅರುಣ್ ಕುಮಾರ್ ಇದ್ದರು.