ಸಾಗರ: ಸಮಾಜದ ಎಲ್ಲಾ ವರ್ಗದವರಿಗೆ ನೆಮ್ಮದಿ ತರುವ ಶಕ್ತಿ ಇರುವುದು ಅಹಿಂಸೆಯ ತತ್ವದಲ್ಲಿ ಎಂದು ಉಪವಿಭಾಗಾಧಿಕಾರಿ ನಾಗರಾಜ ಆರ್.ಸಿಂಗ್ರೇರ್ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ಗುರುವಾರ ಏರ್ಪಡಿಸಿದ್ದ ಮಹಾವೀರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಹಿಂಸೆಯೇ ದೊಡ್ಡ ಧರ್ಮ ಎಂದು ಘೋಷಿಸಿದ ಮಹಾವೀರರ ತತ್ವಾದರ್ಶಗಳು ಸಮಾಜಕ್ಕೆ ಅನುಕರಣೀಯವಾಗಿವೆ ಎಂದರು.
ಜಾತಿ, ಉಪಜಾತಿಗಳನ್ನು ವಿರೋಧಿಸಿ ಸಮಷ್ಠಿ ಸಮಾಜ ನಿರ್ಮಾಣಕ್ಕೆ ಒತ್ತು ಕೊಟ್ಟಿದ್ದು ಭಗವಾನ್ ಮಹಾವೀರರ ವೈಶಿಷ್ಟ್ಯವಾಗಿದೆ. ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕು ಇದೆ ಎಂದು ಪ್ರತಿಪಾದಿಸಿದ ಕಾರಣಕ್ಕೆ ಮಹಾವೀರರ ಚಿಂತನೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ತಹಶೀಲ್ದಾರ್ ತುಷಾರ್ ಬಿ.ಹೊಸೂರು, ಡಿವೈಎಸ್ಪಿ ಮಂಜುನಾಥ ಕವರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಕಲ್ಲಪ್ಪ ಹಾಜರಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಭಗವಾನ್ ಮಹಾವೀರರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.