ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಚಾರಿ ಮಾರ್ಗ ಒತ್ತುವರಿ, ಕೇಬಲ್ ತೆರವು

Last Updated 20 ಫೆಬ್ರುವರಿ 2021, 21:59 IST
ಅಕ್ಷರ ಗಾತ್ರ

ಬೆಂಗಳೂರು: ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಂಗಡಿ ಮುಂಗಟ್ಟುಗಳನ್ನು ಮತ್ತು ಅನಧಿಕೃತವಾಗಿ ಅಳವಡಿಸಿದ್ದ ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ಬಿಬಿಎಂಪಿ ಸಿಬ್ಬಂದಿ ಶನಿವಾರ ತೆರವುಗೊಳಿಸಿದರು.

ಮಹದೇವಪುರ ವಲಯದ 82ನೇ ವಾರ್ಡ್‌ ಇಪಿಐಪಿ ಪ್ರದೇಶದ ರಸ್ತೆಗಳಲ್ಲಿ ಸುಮಾರು 1ಕಿ.ಮೀ.ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಅಂಗಡಿ–ಮುಂಗಟ್ಟು ನಿರ್ಮಿಸಿಕೊಳ್ಳಲಾಗಿತ್ತು. ವಾರ್ಡ್ ಎಂಜಿನಿಯರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 70 ಅಂಗಡಿಗಳನ್ನು ತೆರವುಗೊಳಿಸಲಾಯಿತು.

‘ಪಾದಚಾರಿ ಮಾರ್ಗ ಮತ್ತೆ ಒತ್ತುವರಿ ಮಾಡದಂತೆ ಸೂಚನೆ ನೀಡಲಾಗಿದೆ. ವಾರ್ಡ್‌ನಲ್ಲಿ ಬೇರೆ ರಸ್ತೆಗಳ ಪಾದಚಾರಿ ಮಾರ್ಗಗಳನ್ನೂ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅವುಗಳನ್ನೂ ಸಾರ್ವಜನಿಕರ ಹಿತದೃಷ್ಟಿಯಿಂದ ತೆರವುಗೊಳಿಸಲಾಗುವುದು’ ಎಂದು ವಲಯದ ಮುಖ್ಯ ಎಂಜಿನಿಯರ್‌ ಆರ್.ಎಲ್.ಪರಮೇಶ್ವರಯ್ಯ ತಿಳಿಸಿದ್ದಾರೆ.

ಹೊರಮಾವು, ಕೆ.ಆರ್.ಪುರ, ಎಚ್.ಎ.ಎಲ್, ಹೂಡಿ, ವೈಟ್‌ಫೀಲ್ಡ್ ಮತ್ತು ಇತರೆಡೆ ವಿದ್ಯುತ್ ಕಂಬ ಮತ್ತು ಮರಗಳ ಮೇಲೆ ಜೋತಾಡುತ್ತಿದ್ದ ಕೇಬಲ್‌ಗಳನ್ನು ಬಿಬಿಎಂಪಿ ಸಿಬ್ಬಂದಿ ಕಿತ್ತುಹಾಕಿದರು. ಮಹದೇವಪುರ ಮತ್ತು ಕೆ.ಆರ್‌.ಪುರ ಉಪವಲಯದಲ್ಲಿ ಒಟ್ಟು 48 ಕಿ.ಮೀ ಉದ್ದದ ಕೇಬಲ್ ತೆರವುಗೊಳಿಸಲಾಗಿದೆ.

ಪಾದಚಾರಿಗಳ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಆಯುಕ್ತರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪರಮೇಶ್ವರಯ್ಯ ತಿಳಿಸಿದರು.

‘ಕೇಬಲ್‌ಗಳನ್ನು ಜೋತು ಹಾಕಿದರೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಮತ್ತು ದಂಡ ವಸೂಲಿ ಮಾಡಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT