ಬೆಂಗಳೂರು: ಕೊಳವೆ ಬಾವಿ ಕೊರೆಸುವುದು ಹಾಗೂ ಆರ್ಒ ಘಟಕಗಳ ಅಳವಡಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ ಐದು ವಲಯಗಳ ಹಿಂದಿನ ಜಂಟಿ ಆಯುಕ್ತರು ಮತ್ತು ಮುಖ್ಯ ಎಂಜಿನಿಯರ್ಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಫ್ಐಆರ್ ದಾಖಲಿಸಿದೆ.
ಬಿಜೆಪಿ ಮುಖಂಡ ಎನ್.ಆರ್.ರಮೇಶ್ ನೀಡಿರುವ ದೂರಿನಲ್ಲಿ ದಾಸರಹಳ್ಳಿ, ಮಹದೇವಪುರ, ಆರ್.ಆರ್.ನಗರ, ಯಲಹಂಕ, ಬ್ಯಾಟರಾಯನಪುರ ವಲಯಗಳ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದಾರೆ.
ಕೊಳವೆ ಬಾವಿ ಕೊರೆಸುವ ಮತ್ತು ಆರ್.ಒ ಘಟಕಗಳ ಅಳವಡಿಸುವ ನೆಪದಲ್ಲಿ ಶೇ 80ಕ್ಕೂ ಹೆಚ್ಚು ಅನುದಾನ ಅಂದರೆ, ₹ 400 ಕೋಟಿಗೂ ಅಧಿಕ ಅವ್ಯವಹಾರ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.