ದಾಬಸ್ ಪೇಟೆ: ನರಸೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕರಡಿ ಸಂಚರಿಸುತ್ತಿದ್ದು, ಜನರಲ್ಲಿ ಭೀತಿ ಉಂಟಾಗಿದೆ.
ಮಾಕೇನಹಳ್ಳಿ, ಲಕ್ಷ್ಮಿಪುರ, ಜಾಜೂರು, ನರಸೀಪುರ ಚನ್ನೋಹಳ್ಳಿ ಗ್ರಾಮಗಳ ಸರಹದ್ದಿನಲ್ಲಿ ಕರಡಿ ಓಡಾಡುತ್ತಿದೆ. ಕೆಲ ದಿನಗಳ ಹಿಂದೆ ಚನ್ನೋಹಳ್ಳಿಯಲ್ಲಿ ಮನೆ ಹತ್ತಿರದ ಮರದಿಂದ ಹಲಸಿನ ಹಣ್ಣು ಕಿತ್ತು ತಿಂದು ಹೋಗಿತ್ತು. ಇದೀಗ ಜಾಜೂರು ಗ್ರಾಮದ ದೇವಾಲಯದ ಬಳಿ ರಾತ್ರಿ 12ರ ಸುಮಾರಿಗೆ ಕಾಣಿಸಿಕೊಂಡಿದೆ.
ಗ್ರಾಮಗಳಿಗೆ ಲಗ್ಗೆಯಿಡುತ್ತಿರುವ ಕರಡಿಯು ದಾಳಿ ಮಾಡಬಹುದು ಎಂಬ ಆತಂಕ ಇದೆ ಎಂದು ಜಾಜೂರಿನ ಯುವಕ ಚಿಕ್ಕಹೊನ್ನಿ ತಿಳಿಸಿದರು.
ಕರಡಿಗಳು ರಾತ್ರಿ ವೇಳೆ ಆಹಾರ ಹುಡುಕಿಕೊಂಡು ಹೋಗುತ್ತವೆ. ಸಾರ್ವಜನಿಕರು ರಾತ್ರಿ ಸಂಚರಿಸುವಾಗ ಟಾರ್ಚ್ ಹಾಗೂ ಕೋಲು ಹಿಡಿದುಕೊಳ್ಳಬೇಕು. ಒಂಟಿಯಾಗಿ ಯಾರೂ ಸಂಚರಿಸಬಾರದು. ಕಾಡಂಚಿನ ಗ್ರಾಮ ಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಈ ಗ್ರಾಮಗಳಿಗೆ ಹೊಂದಿ ಕೊಂಡಂತೆ ರಾಮದೇವರ ಬೆಟ್ಟ ಮತ್ತು ನಂದಿಹಳ್ಳಿ ಅರಿಶಿನ ಬೆಟ್ಟಗಳಿದ್ದು, ಅಲ್ಲಿ ಕರಡಿಗಳು ವಾಸಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಅರಣ್ಯದಲ್ಲಿ ಹಣ್ಣಿನ ಗಿಡಗಳು ಕಡಿಮೆ ಆಗಿರುವುದರಿಂದ ಆಹಾರ ಹುಡುಕಿಕೊಂಡು ಗ್ರಾಮಗಳತ್ತ ಬರುತ್ತಿವೆ ಎಂದು ಗ್ರಾಮಸ್ಥರು ಹೇಳಿದರು.