ಬೊಮ್ಮನಹಳ್ಳಿ: ಬೇಗೂರಿನ ನಾಗನಾಥೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ದೇವರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿದ ಬಳಿಕ ಅಲಂಕೃತಗೊಂಡ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಲಾಯಿತು. ಶಾಸಕ ಎಂ.ಕೃಷ್ಣಪ್ಪ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಹಸ್ರಾರು ಭಕ್ತರು ಮತ್ತು ಗ್ರಾಮಸ್ಥರು ಸೇರಿ ತೇರಿಗೆ ದವನ ಚುಚ್ಚಿದ ಬಾಳೆಹಣ್ಣನ್ನು ತೇರಿಗೆ ಎಸೆದು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಸಂಜೆ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಸಮೇತ ಕರಗ ಮಹೋತ್ಸವ ನಡೆಯಿತು. ಪಟ ಕುಣಿತ, ಡಮರುಗ, ಗಾಡಿ ಗೊಂಬೆ, ದೇಶಿಯ ಕಲಾತಂಡಗಳು, ಅಂಬಾರಿ ಉತ್ಸವ , ತಮಟೆ, ಡೊಳ್ಳು ಕುಣಿತ ಮತ್ತು ವೀರಗಾಸೆ ಸೇರಿದಂತೆ ಹಲವು ಸಾಂಸ್ಕೃತಿಕ ಕಲಾ ತಂಡಗಳು ವೈಭವದ ರಥೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದವು.
ನಾಗನಾಥೇಶ್ವರ ಸ್ವಾಮಿ ದೇವಸ್ಥಾನದ ಪುರಾತನ ಕಾಲದ ರಥದ ಮೇಲೆ ಮಂಟಪ ಕುಸಿದು ರಥ ಸಂಪೂರ್ಣ ಹಾನಿಗೀಡಾಗಿತ್ತು. ದಾನಿಗಳು ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ನೂತನ ರಥವನ್ನು ನಿರ್ಮಾಣ ಮಾಡಲಾಗಿತ್ತು.
ಪಾಲಿಕೆ ಮಾಜಿ ಸದಸ್ಯ ಎಂ.ಆಂಜನಪ್ಪ, ದೇವಸ್ಥಾನ ಆಡಳಿತ ಮಂಡಳಿ ಸಮಿತಿ ಅಧ್ಯಕ್ಷ ಹುಲ್ಲಹಳ್ಳಿ ಶ್ರೀನಿವಾಸ್, ಸದಸ್ಯರಾದ ಲೋಕೇಶ್, ಹರೀಶ್, ಪ್ರಶಾಂತ್, ರಾಮಮೂರ್ತಿ, ಮಧುಸೂದನ್, ಸಾವಿತ್ರಿ ನಾಗೇಂದ್ರ, ಕಲಾ ಲೋಕೇಶ್ ಪಾಲ್ಗೊಂಡಿದ್ದರು.