ಬೆಂಗಳೂರು: ನಗರದ ಹಲವೆಡೆ ಗುರುವಾರ ರಾತ್ರಿಯೂ ಜೋರು ಮಳೆ ಆಯಿತು.
ಕೆಲ ದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದ್ದು, ಬುಧವಾರ ಸಂಜೆಯಿಂದ ರಾತ್ರಿಯವರೆಗೂ ಮಳೆ ಆಗಿತ್ತು.
ಗುರುವಾರವೂ ಮೋಡ ಕವಿದ ವಾತಾವರಣವಿತ್ತು. ಸಂಜೆಯಿಂದ ಆರಂಭವಾದ ಮಳೆ ಕೆಲವೆಡೆ ಜೋರಾಗಿ ಸುರಿಯಿತು. ಹಲವೆಡೆ ತುಂತುರು ಮಳೆಯಾಯಿತು.
ನಗರದಲ್ಲಿ ನಿತ್ಯ ರಾತ್ರಿ 8 ಗಂಟೆ ನಂತರ ಕರ್ಫ್ಯೂ ಜಾರಿಯಲ್ಲಿದ್ದು, ಹೀಗಾಗಿ ಜನರ ಓಡಾಟ ಕಡಿಮೆ ಇತ್ತು. ಅದೇ ಸಂದರ್ಭದಲ್ಲೇ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಿತು. ಪ್ರಮುಖ ರಸ್ತೆಗಳಲ್ಲಿ ನೀರು ಹರಿಯಿತು.
ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಮಹಾಲಕ್ಷ್ಮಿ ಲೇಔಟ್, ಲಗ್ಗೆರೆ, ನಂದಿನಿ ಲೇಔಟ್, ಹೆಬ್ಬಾಳ, ಅಶೋಕನಗರ, ಶಿವಾಜಿನಗರ, ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಣ್ಣೂರು, ಬಾಣಸವಾಡಿ ಹಾಗೂ ಹಲವು ಪ್ರದೇಶಗಳಲ್ಲಿ ಮಳೆ ಆಯಿತು.
‘ರಸ್ತೆಯಲ್ಲಿ ನೀರು ಹರಿದಿದ್ದು ಬಿಟ್ಟರೆ ಬೇರೆ ಸಮಸ್ಯೆಗಳ ಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.