ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ‘ಕೆ–ರೈಡ್‌‘ ಕಾಮಗಾರಿ: ‘ಪ್ರಭಾರ’ವೇ ವಿಳಂಬ

ಕೇಂದ್ರ–ರಾಜ್ಯಗಳ ತಿಕ್ಕಾಟದಲ್ಲಿ ಕುಂಟುತ್ತಿದೆ ಉಪನಗರ ರೈಲು ಯೋಜನೆ
Published 24 ನವೆಂಬರ್ 2023, 4:48 IST
Last Updated 24 ನವೆಂಬರ್ 2023, 4:48 IST
ಅಕ್ಷರ ಗಾತ್ರ

ಬೆಂಗಳೂರು: ರೈಲ್ವೆಯ ಮಹತ್ವದ ಯೋಜನೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯ ಬೆಂಗಳೂರು ಉಪನಗರ ಯೋಜನೆ, ‘ಪ್ರಭಾರ’ ವ್ಯವಸ್ಥಾಪಕ ನಿರ್ದೇಶಕರಿಂದ ಕುಂಟುತ್ತಿದೆ.

ಈ ಯೋಜನೆ ಜಾರಿಯಾಗಿ 37 ತಿಂಗಳು ಕಳೆದರೂ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಈ ಅವಧಿಯಲ್ಲಿ ಇಬ್ಬರು ಅಧಿಕಾರಿಗಳು ಪ್ರಭಾರವಾಗಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಹೊಂದಿದ್ದರು. ಇದೀಗ ಎನ್‌. ಮಂಜುಳಾ ಅವರಿಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಜನದಟ್ಟಣೆ, ವಾಹನದಟ್ಟಣೆಯಿಂದಾಗಿ ಬೆಂಗಳೂರಿನಲ್ಲಿ ಸಂಚಾರವೇ ಪ್ರಯಾಸಕರವಾಗಿರುವುದನ್ನು ತಪ್ಪಿಸಲು, ಉಪನಗರ ರೈಲು ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಕೋವಿಡ್‌, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹೊಂದಾಣಿಕೆ ಕೊರತೆ ಇನ್ನಿತರ ಕಾರಣಗಳಿಂದ 2 ವರ್ಷ ಕಾಮಗಾರಿ ಆರಂಭವೇ ಆಗಿರಲಿಲ್ಲ. ಕಾರಿಡಾರ್‌–2 (ಚಿಕ್ಕಬಾಣಾವರ–ಬೈಯಪ್ಪನಹಳ್ಳಿ) 2022ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭವಾಯಿತು. ಆದರೆ, ಕಾರಿಡಾರ್‌–1 (ಬೆಂಗಳೂರು ನಗರ– ದೇವನಹಳ್ಳಿ), ಕಾರಿಡಾರ್–3 (ಹೀಲಲಿಗೆ–ರಾಜಾನುಕುಂಟೆ) ಮತ್ತು ಕಾರಿಡಾರ್‌–4 (ಕೆಂಗೇರಿ–ವೈಟ್‌ಫೀಲ್ಡ್‌) ಕಾಮಗಾರಿಗಳಿಗೆ ಇನ್ನೂ ಚಾಲನೆ ದೊರೆತಿಲ್ಲ.

ಆರಂಭದಲ್ಲಿ ರೈಲ್ವೆಯವರೇ ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರು (ಎಂ.ಡಿ) ಇದ್ದರು. ಕಾಮಗಾರಿ ಆರಂಭವಾಗುವ ಹೊತ್ತಿಗೆ ಅವರು ವರ್ಗಾವಣೆಯಾದರು. ಆ ಜಾಗಕ್ಕೆ ಹೆಚ್ಚುವರಿಯಾಗಿ ಎರಡು–ಮೂರು ಹುದ್ದೆಗಳನ್ನು ನಿರ್ವಹಿಸುತ್ತಿದ್ದ ಗೌರವ್‌ ಗುಪ್ತ ಅವರಿಗೆ ಎಂ.ಡಿ ಹುದ್ದೆಯ ಜವಾಬ್ದಾರಿಯನ್ನೂ ನೀಡಲಾಯಿತು. ತಾಂತ್ರಿಕತೆಯ ಬಗ್ಗೆ ಅವರಿಗೆ ಗೊತ್ತಿದ್ದರಿಂದ ಉತ್ತಮವಾಗಿಯೇ ನಿರ್ವಹಣೆ ಮಾಡಿದರು. ಆದರೆ, ಬೇರೆ ಹೊಣೆಗಾರಿಕೆಗಳ ಕಡೆಯೂ ಗಮನ ಹರಿಸಬೇಕಿದ್ದರಿಂದ ಇಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಆಗಿಲ್ಲ. ಈಗ ಅವರಿಗೂ ವರ್ಗಾವಣೆಯಾಗಿದೆ.

‘ವ್ಯವಸ್ಥಾಪಕ ನಿರ್ದೇಶಕರ ಒಂದು ಸಹಿ ಬೇಕಿದ್ದರೂ ವಿಕಾಸಸೌಧಕ್ಕೆ ಹೋಗಿ ಕಾಯಬೇಕು. ಇದರಲ್ಲೇ ಸಮಯ ವ್ಯರ್ಥವಾಗುತ್ತಿದೆ. ನಾಲ್ಕು ಕಾರಿಡಾರ್‌ಗಳಲ್ಲಿ ಮೂರು ಕಾರಿಡಾರ್‌ಗಳ ಕೆಲಸ ಶುರುವಾಗಿಲ್ಲ. ವ್ಯವಸ್ಥಾಪಕ ನಿರ್ದೇಶಕರು ದೆಹಲಿ–ಬೆಂಗಳೂರಿಗೆ ಆಗಾಗ್ಗೆ ನಡೆಯುವ ಮೀಟಿಂಗ್‌ಗಳಲ್ಲಿ ಭಾಗವಹಿಸಬೇಕು. ಹೆಚ್ಚುವರಿಯಾಗಿ ಹೊಣೆ ಹೊತ್ತರವರಿಗೆ ಅಷ್ಟು ಸಮಯ ಸಿಗುವುದಿಲ್ಲ. ಅದಕ್ಕಾಗಿ ಪೂರ್ಣ ಪ್ರಮಾಣದ ಎಂ.ಡಿ ಬೇಕು’ ಎಂದು ಕೆ–ರೈಡ್‌ನ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟರು.

ರಾಜಕುಮಾರ್ ದುಗರ್
ರಾಜಕುಮಾರ್ ದುಗರ್
ಕೆ.ಎನ್‌. ಕೃಷ್ಣಪ್ರಸಾದ್‌
ಕೆ.ಎನ್‌. ಕೃಷ್ಣಪ್ರಸಾದ್‌
ಎನ್‌. ಮಂಜುಳಾ

ಎನ್‌. ಮಂಜುಳಾ

ಏಳೆಂಟು ವರ್ಷ ಬೇಕು
2026ರ ಒಳಗೆ ಉಪನಗರ ರೈಲು ಯೋಜನೆ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಕಾರಿಡಾರ್‌–2 ಮಾತ್ರ ಶೇ 15ರಷ್ಟು ಕಾಮಗಾರಿಗಳಾಗಿವೆ. ಎಲ್ಲ ನಾಲ್ಕು ಕಾಮಗಾರಿಗಳನ್ನು ಪರಿಗಣಿಸಿದರೆ ಶೇ 4ರಷ್ಟು ಕಾಮಗಾರಿಯಷ್ಟೇ ನಡೆದಿದೆ. ಈಗಿನ ವೇಗವನ್ನು ನೋಡಿದರೆ ನಾಲ್ಕು ಕಾರಿಡಾರ್‌ ಪೂರ್ಣಗೊಳ್ಳಲು ಏಳೆಂಟು ವರ್ಷಗಳು ಬೇಕಾಗುತ್ತದೆ. ಬೆನ್ನತ್ತಿ ಕೆಲಸ ಮಾಡಿಸುವ ಅಧಿಕಾರಿಗಳು ಬೇಕು. ರಾಜಕುಮಾರ್‌ ದುಗರ್ ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಸ್ಥಾಪಕ ‘ವಿಸಿಟಿಂಗ್‌ ಎಂ.ಡಿ’ ಬೇಡ ₹ 15 ಸಾವಿರ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ನಡೆಸುವ ಸಂಸ್ಥೆಗೆ ಪೂರ್ಣ ಪ್ರಮಾಣದ ಎಂ.ಡಿ ಇಲ್ಲ ಎನ್ನುವುದು ಈ ಯೋಜನೆಗೆ ಸರ್ಕಾರಗಳು ಎಷ್ಟು ಪ್ರಾಮುಖ್ಯ ನೀಡಿವೆ ಎಂಬುದನ್ನು ತೋರಿಸುತ್ತದೆ. ಶೇ 20ರಷ್ಟು ಕೇಂದ್ರ ಸರ್ಕಾರ ಶೇ 20ರಷ್ಟು ರಾಜ್ಯ ಸರ್ಕಾರ ಅನುದಾನ ಒದಗಿಸುತ್ತದೆ. ಉಳಿದ ಶೇ 60ರಷ್ಟು ವೆಚ್ಚವನ್ನು ಬಾಹ್ಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಬೇಕು. ವಿದೇಶಿ ಬ್ಯಾಂಕ್‌ಗಳ ಜೊತೆಗೆ ಸಂವಹನ ನಡೆಸಬೇಕು. ಅದಕ್ಕೆಲ್ಲ ಕಾಯಂ ಎಂಡಿ ಬೇಕು. ಹಿಂದಿನ ಎಂಡಿ ಸಮರ್ಥರಿದ್ದರೂ ಅವರಿಗೆ ಸಮಯ ಸಾಕಾಗುತ್ತಿರಲಿಲ್ಲ. ಹೊಸ ಎಂಡಿ ಕಾರ್ಯವೈಖರಿ ಹೇಗಿದೆ ಎಂಬುದು ಗೊತ್ತಿಲ್ಲ. ಹೊಸಬರನ್ನೇ ಮುಂದುವರಿಸುವುದಿದ್ದರೂ ಪರವಾಗಿಲ್ಲ ಅವರಿಗೆ ಬೇರೆ ಹೊಣೆಗಳನ್ನು ನೀಡಬಾರದು. ಇಲ್ಲದೇ ಇದ್ದರೆ ಅವರೂ ‘ವಿಸಿಟಿಂಗ್‌ ಎಂ.ಡಿ’ಯಾಗಬೇಕಾಗುತ್ತದೆ. ಕೆ.ಎನ್‌. ಕೃಷ್ಣಪ್ರಸಾದ್‌ ರೈಲ್ವೆ ಹೋರಾಟಗಾರ
ಮಂಜುಳಾ ನೂತನ ಎಂ.ಡಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಎನ್‌. ಮಂಜುಳಾ ಅವರಿಗೆ ‘ಕೆ–ರೈಡ್’ ಎಂ.ಡಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT