ಬೆಂಗಳೂರು: ವಾಹನಗಳ ಸುಗಮ ಸಂಚಾರ ಹಾಗೂ ಸಂಚಾರ ನಿಯಮಗಳ ಜಾರಿ ಹೊಣೆ ಹೊತ್ತುಕೊಂಡಿರುವ ನಗರದ ಪೊಲೀಸ್ ವಿಭಾಗಕ್ಕೆ ಹೊಸದಾಗಿ ‘ವಿಶೇಷ ಕಮಿಷನರ್’ ಹುದ್ದೆ ಸೃಷ್ಟಿಸಲಾಗಿದ್ದು, ಈ ಹುದ್ದೆಗೆ ಎಡಿಜಿಪಿ ಎಂ.ಎ. ಸಲೀಂ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
‘ಪೊಲೀಸ್ ಕಮಿಷನರ್ ಅಧೀನದಲ್ಲಿ ಡಿಐಜಿ ಶ್ರೇಣಿಯ ಐಪಿಎಸ್ ಅಧಿಕಾರಿಯೊಬ್ಬರು ಸಂಚಾರ ವಿಭಾಗದ ನಿರ್ವಹಣೆ ಮಾಡುತ್ತಿದ್ದರು. ನಗರದಲ್ಲಿ ಸದ್ಯ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತಿವೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದಕ್ಕಾಗಿ, ಸಂಚಾರ ವಿಭಾಗದ ಹೊಣೆಯನ್ನು ನಿರ್ವಹಿಸಲು ವಿಶೇಷ ಕಮಿಷನರ್ ಹುದ್ದೆ ಸೃಷ್ಟಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಎಂ.ಎ. ಸಲೀಂ ಅವರು ಈ ಹಿಂದೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿ ಕೆಲಸ ಮಾಡಿದ್ದರು. ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರು. ಇದೀಗ, ಅವರನ್ನೇ ವಿಶೇಷ ಕಮಿಷನರ್ ಆಗಿ ವರ್ಗಾಯಿಸಲಾಗಿದೆ’ ಎಂದರು.
ಬಿ.ಆರ್. ರವಿಕಾಂತೇಗೌಡ ವರ್ಗಾವಣೆ: ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿದ್ದ ಬಿ.ಆರ್. ರವಿಕಾಂತೇಗೌಡ ಅವರನ್ನು ಸಿಐಡಿಯ ಡಿಐಜಿ ಆಗಿ ವರ್ಗಾಯಿಸಲಾಗಿದೆ.
ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ಡಿಐಜಿ ಹುದ್ದೆಗೆ ಬಡ್ತಿ ನೀಡುವ ಮೂಲಕ ಜಂಟಿ ಕಮಿಷನರ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ವಿಶೇಷ ಕಮಿಷನರ್ ಅಧೀನದಲ್ಲಿ ಜಂಟಿ ಕಮಿಷನರ್ ಅವರು ಕೆಲಸ ಮಾಡಲಿದ್ದಾರೆ. ಡಿಸಿಪಿ ಹಾಗೂ ಇತರೆ ವಿಭಾಗಗಳು ಯಥಾಪ್ರಕಾರ ಮುಂದುವರಿಯಲಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.