ಬೆಂಗಳೂರು: ‘ಪೊಲೀಸ್ ಇನ್ಸ್ಪೆಕ್ಟರ್’ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರೋಪದಡಿ ಬೆಸ್ಕಾಂನ ಸಹಾಯಕ ಎಂಜಿನಿಯರ್ ಗಂಗಾಧರ್ ಅವರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಗಂಗಾಧರ್, ಮಲ್ಲೇಶ್ವರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಕೃತ್ಯದ ವಿರುದ್ಧ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಕಮಿಷನರ್ ಆದೇಶ ಹೊರಡಿಸಿ
ದ್ದಾರೆ. ಹೀಗಾಗಿ, ಎಲ್ಲ ಕಡತ
ಗಳನ್ನು ಸಿಸಿಬಿ ಅಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಆರೋಪಿಯನ್ನೂ ಸಿಸಿಬಿ ಅಧಿಕಾರಿಗಳು ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಿದ್ದಾರೆ’ ಎಂದು ತಿಳಿಸಿದರು.
ಇನ್ಸ್ಪೆಕ್ಟರ್ ಗುರುತಿನ ಚೀಟಿ: ‘ಬೆಸ್ಕಾಂ ನೀಡಿದ್ದ ವಾಕಿಟಾಕಿ ಇಟ್ಟುಕೊಂಡಿದ್ದ ಆರೋಪಿ, ‘ಪೊಲೀಸ್ ಇನ್ಸ್ಪೆಕ್ಟರ್, ಕರ್ನಾಟಕ ಪೊಲೀಸ್ ಇಲಾಖೆ’ ಎಂಬುದಾಗಿ ಗುರುತಿನ ಚೀಟಿ ಸಹ ಮಾಡಿಸಿಕೊಂಡಿದ್ದರು’ ಎಂದು ಅಧಿಕಾರಿ ಹೇಳಿದರು.
ತನ್ನ ಕಾರಿನ ಮುಂಭಾಗದಲ್ಲಿ ‘ಪೊಲೀಸ್ ಜಾಗೃತ ದಳ’ ಎಂಬ ಫಲಕವನ್ನು ಆರೋಪಿ ನೇತು ಹಾಕಿದ್ದರು. ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆಡೆ ಸಂಚರಿಸುತ್ತಿದ್ದ ಆರೋಪಿ, ಹಲವರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರೆಂಬ ಆರೋಪವಿದೆ’ ಎಂದು ತಿಳಿಸಿದರು.
‘ಕೆಲ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುತ್ತಿದ್ದ ಆರೋಪಿ, ಪ್ರಕರಣ ದಾಖಲಿಸುವುದಾಗಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದರು. ಭೂ ಸ್ವಾಧೀನಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ವತಿಯಿಂದ ಪರಿಹಾರ ಕೊಡಿಸುವುದಾಗಿ ಹೇಳಿ ಕೆಲ ರೈತರಿಗೂ ಆರೋಪಿ ವಂಚಿಸಿದ್ದರೆಂಬ ಮಾಹಿತಿ ಇದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ಗಳಲ್ಲಿ ಉಚಿತವಾಗಿ ಸಂಚರಿಸಲು ಇನ್ಸ್ಪೆಕ್ಟರ್ ಗುರುತಿನ ಚೀಟಿ ಬಳಸುತ್ತಿದ್ದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾರೆ. ಆರೋಪಿ ಹಲವು ವರ್ಷಗಳಿಂದ ವಂಚನೆ ಮಾಡುತ್ತಿರುವ ಬಗ್ಗೆ ಪುರಾವೆಗಳು ಸಿಕ್ಕಿವೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ಮುಂದುವರಿಸಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.