ಬೆಂಗಳೂರು: ಒಂದು ವರ್ಷದಿಂದ ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬೈಕ್ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯದ ಅವಿನಾಶ್, ಹಾಸನದ ರಾಹುಲ್ ಹಾಗೂ ಶಶಿ ಬಂಧಿತರು.
‘ಬಂಧಿತರಿಂದ ₹25 ಲಕ್ಷದ ಮೌಲ್ಯದ 20 ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ದಯಾನಂದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆರೋಪಿಗಳು ಮನೆ ಎದುರು ಹಾಗೂ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಕಳವು ಮಾಡುತ್ತಿದ್ದರು. ನಕಲಿ ಕೀ ಬಳಸಿ ಇಲ್ಲವೇ ಹ್ಯಾಂಡಲ್ ಲಾಕ್ ತೆಗೆದು ಬೈಕ್ ಕಳವು ಮಾಡುತ್ತಿದ್ದರು. ಶೇಷಾದ್ರಿಪುರ ಠಾಣೆ ಸಿಬ್ಬಂದಿ ಗಸ್ತಿನಲ್ಲಿದ್ದಾಗ, ಇಬ್ಬರು ವ್ಯಕ್ತಿಗಳು ನಂಬರ್ ಪ್ಲೇಟ್ ಇಲ್ಲದ ಒಂದು ಬೈಕ್ನಲ್ಲಿ ತೆರಳುತ್ತಿದ್ದರು. ಆಗ ಅನಮಾನಗೊಂಡು ಅವರನ್ನು ತಡೆದು ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳವು ಮಾಡುತ್ತಿರುವುದು ಗೊತ್ತಾಯಿತು’ ಎಂದು ಹೇಳಿದರು.
‘ಇಬ್ಬರು ಆರೋಪಿಗಳು ಬೆಂಗಳೂರು ಅಲ್ಲದೇ ಚಿಕ್ಕಮಗಳೂರು, ಮಂಡ್ಯ, ದಾವಣಗೆರೆ, ಹಾಸನದ ಬೈಕ್ಗಳನ್ನು ಕಳವು ಮಾಡಿದ್ದಾರೆ. ಸದ್ಯಕ್ಕೆ 20 ಪ್ರಕರಣಗಳು ಪತ್ತೆಯಾಗಿವೆ. ತನಿಖೆ ಮುಂದುವರಿಸಲಾಗಿದೆ’ ಎಂದು ಮಾಹಿತಿ ನೀಡಿದರು.