ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳಿಗೆ ದುಡಿದ ಎಷ್ಟೋ ಜನರು ಯಾವ ಸ್ಥಾನಮಾನವೂ ಇಲ್ಲದೆ ತೆರೆಗೆ ಸರಿದಿದ್ದಾರೆ. ಅಧಿಕಾರ ಪಡೆಯುವ ನಾಯಕರು ಅಂಥವರ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ನಗರದಲ್ಲಿ ಗುರುವಾರ ‘ದಿ ನ್ಯಾಶನಲ್ ಕೋ ಆಪರೇಟಿವ್ ಬ್ಯಾಂಕ್’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ.ವಿ.ಎಸ್. ಕೃಷ್ಣಯ್ಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾಜಿ ಸಚಿವ ಕೃಷ್ಣಯ್ಯರ್ ಅವರು ಕಾಂಗ್ರೆಸ್ನ ನಿಷ್ಠಾವಂತ ಮುಖಂಡರಾಗಿದ್ದರು. ಅವರ ಜೀವಿತಾವಧಿಯಲ್ಲಿ ಸಚಿವರಾಗುವ ಅವಕಾಶ ಸಿಕ್ಕಿದ್ದು ನಾಲ್ಕೇ ತಿಂಗಳು. ವಹಿಸಿದ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಆರೋಗ್ಯ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ಚಿಕಿತ್ಸೆಗೂ ಅವರ ಬಳಿ ಹಣವಿರಲಿಲ್ಲ. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ₹13 ಲಕ್ಷ ಭರಿಸಿದ್ದರು. ಅಂತಹ ನಾಯಕನ ಜೀವನ ಚರಿತ್ರೆ ಪಠ್ಯವಾಗಬೇಕು ಎಂದು ಅವರು ಹೇಳಿದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಕೃಷ್ಣಯ್ಯರ್ ಅವರ ಜತೆಗಿನ ರಾಜಕೀಯ ಒಡನಾಟದ ಘಟನೆಗಳನ್ನು ಮೆಲುಕು ಹಾಕಿದರು.
ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್.ಸಿ.ಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಶಾಸಕರಾದ ಎಲ್.ಎ.ರವಿ ಸುಬ್ರಹ್ಮಣ್ಯ, ಯು.ಬಿ.ವೆಂಕಟೇಶ್, ಅ.ದೇವೇಗೌಡ ಉಪಸ್ಥಿತರಿದ್ದರು.