ಬೆಂಗಳೂರು: ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ನಿತೇಶ್ಕುಮಾರ್ ಎಂಬುವರ ಮೇಲೆ ಹಲ್ಲೆ ನಡೆಸಿದ ಇಬ್ಬರು ಯುವಕರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಭಾಕರ್ ಮತ್ತು ಜಾನ್ ಬಂಧಿತರು. ಇದೇ 1ರಂದು ಮಧ್ಯಾಹ್ನ ನಡೆದಿರುವ ಘಟನೆ ಸಂಬಂಧ ಭದ್ರತಾ ಮೇಲ್ವಿಚಾರಕ ಎಸ್.ಪೇರುಮಾಳ್ ಅವರು ದೂರು ನೀಡಿದ್ದರು. ಹಲ್ಲೆನಡೆಸಿದ್ದ ಪ್ರಭಾಕರ್ ಹಾಗೂ ಜಾನ್ ತಲೆ ಮರೆಸಿಕೊಂಡಿದ್ದರು.
ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬುಲೆವಾರ್ಡ್ನಲ್ಲಿ ನಿತೇಶ್ಕುಮಾರ್ ಅವರು ಗಸ್ತು ತಿರುಗುತ್ತಿದ್ದರು. ನಿರ್ಬಂಧಿತ ಜಾಗದಲ್ಲಿ ನಿಂತಿದ್ದ ಆರೋಪಿಗಳನ್ನು ನೋಡಿ ಸ್ಥಳದಿಂದ ಹೊರಟು ಹೋಗುವಂತೆ ಹೇಳಿದ್ದರು. ಅಷ್ಟಕ್ಕೆ ಸಿಟ್ಟಾದ ಆರೋಪಿಗಳು ನಿತೇಶ್ಕುಮಾರ್ ಜೊತೆ ಜಗಳ ತೆಗೆದಿದ್ದರು.
ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿಗಳು ಕೈಯಲ್ಲಿದ್ದ ಉಂಗುರದಿಂದ ನಿತೇಶ್ಕುಮಾರ್ ಅವರ ಮುಖಕ್ಕೆ ಹೊಡೆದಿದ್ದರು. ರಕ್ತ ಸೋರಲಾರಂಭಿಸಿತ್ತು. ರಕ್ಷಣೆಗೆ ಬಂದ ಸಹೋದ್ಯೋಗಿಗಳೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.