ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸಿ ಪ್ರಯಾಣಿಕರ ಮೊಬೈಲ್, ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಗೋರಿಪಾಳ್ಯ ಗ್ಯಾಂಗ್ ಮಾರತ್ತಹಳ್ಳಿ ಪೊಲೀಸರ ಬಲೆಗೆ ಬಿದ್ದಿದೆ.
‘ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಹೊರವರ್ತುಲ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಗಳಲ್ಲಿ ಮೇಲಿಂದ ಮೇಲೆ ಕಳ್ಳತನಗಳು ನಡೆಯುತ್ತಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಠಾಣೆಯ ಪೊಲೀಸರು, ಪ್ರಯಾಣಿಕರ ವೇಷದಲ್ಲಿ ಬಸ್ಸಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.
‘ಗೋರಿಪಾಳ್ಯದಅಸ್ಲಂ ಪಾಷ (46),ಸಯ್ಯದ್ ಅಕ್ಮಲ್ (51) ಹಾಗೂ ಪೈಜಾನ್ (25) ಬಂಧಿತರು. ಅವರಿಂದ ₹6 ಲಕ್ಷ ಮೊತ್ತದ 22 ಮೊಬೈಲ್ಗಳು ಹಾಗೂ 113 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.
ರೌಡಿಶೀಟರ್ ಕಟ್ಟಿದ್ದ ಗ್ಯಾಂಗ್: ‘ಬಂಧಿತ ಅಸ್ಲಾಂ ಪಾಷ, ಜೆ.ಜೆ.ನಗರ ಠಾಣೆಯ ರೌಡಿಶೀಟರ್. ಈ ಹಿಂದೆಯೂ ಹಲವು ಅಪರಾಧಗಳಲ್ಲಿ ಆತ ಭಾಗಿಯಾಗಿದ್ದ. ಸ್ಥಳೀಯ ವ್ಯಕ್ತಿಗಳ ಗ್ಯಾಂಗ್ ಕಟ್ಟಿಕೊಂಡಿದ್ದ ಆತ, ಬಸ್ಸಿನಲ್ಲಿ ಕಳ್ಳತನ ನಡೆಸಲಾರಂಭಿಸಿದ್ದ’ ಎಂದು ಪೊಲೀಸರು ಹೇಳಿದರು.
‘ಒಟ್ಟಿಗೆ ಬಸ್ ಹತ್ತುತ್ತಿದ್ದ ಮೂವರು, ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್, ಚಿನ್ನಾಭರಣ ಹಾಗೂ ನಗದು ಕದಿಯುತ್ತಿದ್ದರು. ಇದುವರೆಗೂ 10 ಕಡೆ ಕಳ್ಳತನ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.