ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ದೆಹಲಿಗೆ ತೆರಳಲಿದ್ದು, ಪಕ್ಷದ ವರಿಷ್ಠರ ಜತೆ ಸಮಾಲೋಚನೆ ನಡೆಸಿ ಬುಧವಾರವೇ ವಾಪಸಾಗಲಿದ್ದಾರೆ.
ವರಿಷ್ಠರಿಂದ ದಿಢೀರ್ ಆಹ್ವಾನ ಬಂದ ಕಾರಣ ಬುಧವಾರ ಬೆಳಿಗ್ಗೆ 10.30 ಕ್ಕೇ ಸಚಿವ ಸಂಪುಟ ಸಭೆಯನ್ನು ನಡೆಸಿ, 11.30 ಕ್ಕೆ ದೆಹಲಿಗೆ ಪ್ರಯಾಣ ಬೆಳೆಸುವರು. ಈ ಮೊದಲು ಬೆಳಿಗ್ಗೆ 11.30 ಕ್ಕೆ ಸಂಪುಟ ಸಭೆ ನಿಗದಿಯಾಗಿತ್ತು.
ದೀಪಾವಳಿ ಹಬ್ಬ ಮುಗಿದ ತಕ್ಷಣವೇ ವರಿಷ್ಠರ ಒಪ್ಪಿಗೆ ಪಡೆದು ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ ಮಾಡುವುದಾಗಿ ತಿಳಿಸಿದ್ದರು. ಇತ್ತೀಚೆಗೆ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಸಾಧಿಸಿರುವುದರಿಂದ ಯಡಿಯೂರಪ್ಪ ಅವರಿಗೆ ಬಲ ಬಂದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.