ಬೆಂಗಳೂರು: ಪ್ರಯಾಣ ದರ ಹೆಚ್ಚಳ ಮಾಡಬೇಡಿ...ಹೀಗೆಂದು ಬಹುಪಾಲು ಪ್ರಯಾಣಿಕರು ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಮತದಾನ ಮಾಡಿದರು. ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ (ಬಿಬಿಪಿವಿ) ಇಂಥದ್ದೊಂದು ಅಭಿಯಾನ ನಡೆಸಿತು.
ಮೆಜೆಸ್ಟಿಕ್ ನಿಲ್ದಾಣದಲ್ಲಿ ನಿಂತವರಿಗೆ, ಬಸ್ಗಳಲ್ಲಿ ಪ್ರಯಾಣಿಸುವವರಿಗೆ ವೇದಿಕೆ ಸದಸ್ಯರು ಮತಪತ್ರ ನೀಡಿದರು. ಪ್ರಯಾಣಿಕರು ತಮ್ಮ ಆಯ್ಕೆಯನ್ನು ಗುರುತುಹಾಕಿ ಮತಪೆಟ್ಟಿಗೆಯಲ್ಲಿ ಹಾಕಿದರು. 95ರಷ್ಟು ಪ್ರಯಾಣಿಕರು ದರ ಏರಿಕೆ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಏಕೆ ಈ ಮತದಾನ?: ‘ಡೀಸೆಲ್ ಬೆಲೆ ಏರಿಕೆ, ನಿರ್ವಹಣಾ ವೆಚ್ಚದ ಹೆಚ್ಚಳದ ಕಾರಣಗಳಿಂದಾಗಿ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಇತ್ತೀಚೆಗೆ ಬಸ್ ಪ್ರಯಾಣ ದರ ಏರಿಸಲು ಮುಂದಾಗಿದ್ದವು. ಕೊನೇ ಕ್ಷಣದಲ್ಲಿ ಆ ಆದೇಶಕ್ಕೆ ಮುಖ್ಯಮಂತ್ರಿ ತಡೆ ನೀಡಿದ್ದರು. ಮುಂದೆಯೂ ಬಸ್ ಪ್ರಯಾಣ ದರ ಏರಿಸಬಾರದು’ ಎಂಬ ಉದ್ದೇಶದಿಂದ ಈ ಮತದಾನ ಅಭಿಯಾನ ನಡೆಸಿದ್ದೇವೆ ಎಂದು ವೇದಿಕೆ ಸದಸ್ಯರು ಹೇಳಿದರು.
ಏನು ಮಾಡಬೇಕು?: ಬಿಎಂಟಿಸಿಗೆ ಸರ್ಕಾರ ಆರ್ಥಿಕ ಅನುದಾನ ನೀಡಬೇಕು. ದರವನ್ನು ಇಳಿಕೆ ಮಾಡುವ ಮೂಲಕ ಹೆಚ್ಚು ಜನ ಬಸ್ನಲ್ಲಿ ಪ್ರಯಾಣಿಸುವಂತೆ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಮುಂಚೂಣಿಯಲ್ಲಿದ್ದವರು: ಮಹಿಳಾ ಕಾರ್ಮಿಕರ ಸಂಘಟನೆ, ಗಾರ್ಮೆಂಟ್ ಮತ್ತು ಟೆಕ್ಸ್ಟೈಲ್ ಕಾರ್ಖಾನೆ ಕಾರ್ಮಿಕರು, ಸಾಧನಾ ಮಹಿಳಾ ಸಂಘ, ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದವರು ಭಾಗವಹಿಸಿದ್ದರು.