ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಒಂಬತ್ತು ತಿಂಗಳ ಮಗುವನ್ನು ತಾಯಿಯೇ ಕೊಂದಿರುವ ಸಂಗತಿ ಹೊರಬಿದ್ದಿದೆ.
ತಿಗಳರಪಾಳ್ಯದ ಐಷಾರಾಮಿ ಮನೆಯೊಂದರಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34),ಸಿಂಧುರಾಣಿ (33) ಹಾಗೂ ಮಧುಸಾಗರ್ (25) ಅವರ ಮೃತದೇಹಗಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಸಿಂಧೂರಾಣಿ ಅವರ ಒಂಬತ್ತು ತಿಂಗಳ ಮಗು ಮೃತಪಟ್ಟ ಸ್ಥಿತಿಯಲ್ಲಿ ಮನೆಯ ಮಂಚದ ಮೇಲೆ ಪತ್ತೆಯಾಗಿತ್ತು.
ಒಂಬತ್ತು ತಿಂಗಳ ಮಗುವಿನ ಮರಣೋತ್ತರ ಪರೀಕ್ಷೆ ವರದಿ ಇದೀಗ ಪೊಲೀಸರ ಕೈ ಸೇರಿದೆ.
‘ಮಗುವಿನದ್ದು ಅಸಹಜ ಸಾವಲ್ಲ, ಕೊಲೆ' ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ತಾಯಿ ಸಿಂಧುರಾಣಿ ಅವರೇ, ಬಟ್ಟೆಯಿಂದ ಕತ್ತು ಬಿಗಿದು ಮಗುವನ್ನು ಕೊಂದಿರುವ ಅನುಮಾನ ದಟ್ಟವಾಗಿದೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಸ್ಕ್ರೀನ್ಶಾಟ್ ಪತ್ತೆ; ‘ಮೃತ ಮಧುಸಾಗರ್ ಅವರ ಲ್ಯಾಪ್ಟಾಪ್ನಲ್ಲಿ ಅವರ ತಂದೆ ಶಂಕರ್, ಮಹಿಳೆಯರ ಜೊತೆ ವಾಟ್ಸ್ಆ್ಯಪ್ನಲ್ಲಿ ಚಾಟಿಂಗ್ ಮಾಡಿದ್ದ ಸ್ಕ್ರೀನ್ಶಾಟ್ಗಳೂ ಲಭ್ಯವಾಗಿವೆ.’ ಎಂದೂ ಮೂಲಗಳು ತಿಳಿಸಿವೆ.