ಬೆಂಗಳೂರು: ‘ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಶಾಸಕ ಭೈರತಿ ಸುರೇಶ್ ಕಾರಣ’ ಎಂದು ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಆರೋಪಕ್ಕೆ ಸುರೇಶ್ ತಿರುಗೇಟು ನೀಡಿದ್ದಾರೆ.
‘ನಾನೇ ಕುಡಿಯಲ್ಲ. ರಾಕೇಶ್ಗೆ ಹೇಗೆ ಕುಡಿಸಲಿ. ಆತ ನನ್ನ ತಮ್ಮ, ಅವನ ಸಾವಿಗೆ ನಾನೇಗೆ ಕಾರಣನಾಗುತ್ತೇನೆ? ನಾಗರಾಜ್ ಹತಾಶೆಯಿಂದ ಆರೋಪ ಮಾಡುತ್ತಿದ್ದಾರೆ. ಸಾವಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು’ ಎಂದು ಕುಟುಕಿದ್ದಾರೆ.
‘ಸಿದ್ದರಾಮಯ್ಯ ನೈತಿಕ ಸ್ಥೈರ್ಯ ಕುಗ್ಗಿಸಲು ರಾಕೇಶ್ ಸಾವಿನ ವಿಚಾರ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ಗೆ ದ್ರೋಹ ಬಗೆದು ಹೋಗಿದ್ದು, ಸಿದ್ದರಾಮಯ್ಯ ಅವರನ್ನು ಟೀಕಿಸಲು ನೈತಿಕತೆ ಇಲ್ಲವಾಗಿದೆ. ನಿಮ್ಮ ಬಂಡವಾಳ, ನೀವು ನಡೆಸಿರುವ ಹಗರಣಗಳ ಬಗ್ಗೆಯೂ ಗೊತ್ತಿದೆ’ ಎಂದು ಆರೋಪಿಸಿದ್ದಾರೆ.
‘ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾಗ ನಾಗರಾಜ್ ಎಲ್ಲಿದ್ದರು ಎಂದು ಹಿಂದಿರುಗಿ ನೋಡಲಿ. ಹೊಸಕೋಟೆಯಲ್ಲಿ ಬಚ್ಚೇಗೌಡ ಕಟ್ಟಿ ಬೆಳೆಸಿದ ಮನೆಯಲ್ಲಿ ನೀವು ವಾಸ ಮಾಡಲು ಹೋಗಿದ್ದೀರಿ’ ಎಂದು ಹೇಳಿದ್ದಾರೆ.