ಬೆಂಗಳೂರು: ‘ಕಾನೂನುಬದ್ಧವಾದ ಸೂಕ್ತ ಕಾರಣ ನೀಡದೇ ನನ್ನ ಒಸಿಐ ವೀಸಾ ರದ್ದು ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ನಟ ಚೇತನ್ ತಿಳಿಸಿದ್ದಾರೆ.
ಒಸಿಐ ವೀಸಾ ರದ್ದು ಆದೇಶ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ವೀಸಾ ರದ್ದು ಆದೇಶದ ಪ್ರತಿ ಏಪ್ರಿಲ್ 14ರಂದು ನನ್ನ ಕೈ ಸೇರಿದೆ. ಈ ಬಗ್ಗೆ ವಕೀಲರ ಜೊತೆ ಚರ್ಚಿಸಲಾಗಿದ್ದು, ಸದ್ಯದಲ್ಲೇ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಿದ್ದೇನೆ’ ಎಂದರು.
‘18 ವರ್ಷದಿಂದ ನಾನು ಭಾರತದಲ್ಲಿದ್ದೇನೆ. 12 ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಸಿದ್ಧಾಂತವನ್ನು ಸೋಲಿಸಲು ಆಗದವರು, ಅನ್ಯ ಮಾರ್ಗಗಳ ಮೂಲಕ ನನ್ನ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡುತ್ತೇನೆ’ ಎಂದು ಹೇಳಿದ್ದಾರೆ.
‘ಬ್ಯಾಹ್ಮಣ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಪ್ರಕರಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಉಳಿದಂತೆ, ಮೂರು ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ. ನನ್ನ ವಿರುದ್ಧದ ಯಾವುದೇ ಪ್ರಕರಣವೂ ಸಾಬೀತಾಗಿಲ್ಲ. ಇಂಥ ಸ್ಥಿತಿಯಲ್ಲಿ ಏಕಾಏಕಿ ವೀಸಾ ರದ್ದುಪಡಿಸಿರುವುದು ನ್ಯಾಯಸಮ್ಮತವಲ್ಲ’ ಎಂದು ಆರೋಪಿಸಿದ್ದಾರೆ.