ಬೆಂಗಳೂರು: ಆರ್.ಟಿ.ನಗರ ಸಮೀಪದ ಮನೋರಾಯನಪಾಳ್ಯದಲ್ಲಿ ಮೂರು ಮಹಡಿಯ ಕಟ್ಟಡವೊಂದುಪಕ್ಕದ ಖಾಲಿ ನಿವೇಶನದಲ್ಲಿ ಪಾಯ ತೆಗೆದ ಪರಿಣಾಮ ಬುಧವಾರ ವಾಲಿಕೊಂಡಿದೆ. ವಾಲಿಕೊಂಡ ಕಟ್ಟಡದ ನಿವಾಸಿಗಳು ಮನೆಯನ್ನು ಬುಧವಾರ ತೆರವುಗೊಳಿಸಿದರು.ಕಟ್ಟಡ (ಮನೆ ನಂಬರ್ 33) ವಾಲಿಕೊಂಡಿರುವ ಮಾಹಿತಿ ಬಂದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಪಾಯ ತೆಗೆಯುವ ಕೆಲಸ ನಿಲ್ಲಿಸುವಂತೆ ಸೂಚಿಸಿದರು.
ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್, ‘ವಾಲಿಕೊಂಡಿರುವ ಕಟ್ಟಡವು 20 ವರ್ಷ ಹಳೆಯದು. ಅದರ ಪಕ್ಕದಲ್ಲಿ ಪಾಯ ತೆಗೆದಿದ್ದರಿಂದ ಈ ಕಟ್ಟಡಕ್ಕೆ ಧಕ್ಕೆ ಉಂಟಾಗಿದೆ. ಕಟ್ಟಡದ ಹಾಗೂ ಪಕ್ಕದ ನಿವೇಶನದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದೇವೆ’ ಎಂದರು.
ಸ್ಥಳೀಯ ನಿವಾಸಿ ಸಾಜಿದ್ ಪಾಷಾ, ‘ಮೂರು ಕುಟುಂಬಗಳು ಈ ಕಟ್ಟಡದಲ್ಲಿ ನೆಲೆಸಿದ್ದವು. ಕಟ್ಟಡ ವಾಲುತ್ತಿರುವ ಬಗ್ಗೆ ಸೂಚನೆ ಸಿಕ್ಕಿತ್ತು. ಹೀಗಾಗಿ, ಇಂದು ಬೆಳಿಗ್ಗೆ ಅವರು ಮನೆ ತೆರವುಗೊಳಿಸಿದರು’ ಎಂದರು.