ಬೆಂಗಳೂರು: ಮಾದಕ ವಸ್ತು ಖರೀದಿಗೆ ಹಣ ಹೊಂದಿಸುವುದಕ್ಕಾಗಿ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಾಪೂಜಿನಗರದ ಮಹಮ್ಮದ್ ಮುದಾಸೀರ್ (20 ಹಾಗೂ ಮಹಮ್ಮದ್ ರಿಜ್ವಾನ್ ಬಂಧಿತರು. ಅವರಿಂದ ₹ 4.55 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
‘ಸಣ್ಣ ವಯಸ್ಸಿನಲ್ಲೇ ದುಶ್ಚಟಗಳ ದಾಸರಾಗಿದ್ದ ಆರೋಪಿಗಳು, ಮಾದಕವ್ಯಸನಿಗಳೂ ಆಗಿದ್ದರು. ಮಾದಕ ವಸ್ತು ಖರೀದಿಸಲು ಹಣ ಇಲ್ಲದಿದ್ದಾಗ, ಕಳ್ಳತನ ನಡೆಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಆರಂಭದಲ್ಲಿ ಮಹಮ್ಮದ್ ಮುದಾಸೀರ್, ಮನೆಗಳಲ್ಲಿ ಕಳ್ಳತನ ಮಾಡಲಾರಂಭಿಸಿದ್ದ. ನಂತರ, ಬಾಲ್ಯಸ್ನೇಹಿತ ರಿಜ್ವಾನ್ನನ್ನು ತನ್ನೊಂದಿಗೆ ಸೇರಿಸಿಕೊಂಡಿದ್ದ. ಅವರಿಬ್ಬರು ಸೇರಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು. ಕದ್ದ ವಾಹನದಲ್ಲೇ ಸುತ್ತಾಡಿ, ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.’
‘ದ್ವಿಚಕ್ರ ವಾಹನ ಹಾಗೂ ಚಿನ್ನಾಭರಣವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಬಂದ ಹಣವನ್ನು ಮಾದಕ ವಸ್ತು ಖರೀದಿಗೆ ಖರ್ಚು ಮಾಡುತ್ತಿದ್ದರು. ಏಪ್ರಿಲ್ 23ರಂದು ಸುಮನ್ ಎಂಬುವರ ಸರವನ್ನು ಆರೋಪಿಗಳು ಕಿತ್ತೊಯ್ದಿದ್ದರು. ಆ ಸಂಬಂಧ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ವಿವರಿಸಿದರು.