ಬೆಂಗಳೂರು: 'ಕೊರೊನಾದಂತಹ ಕಾಲದಲ್ಲಿ ನಾವೆಲ್ಲರೂ ಗ್ರಾಮಗಳತ್ತ ಹಿಂದಿರುಗಬೇಕು' ಎಂದುಹಿರಿಯ ಪತ್ರಕರ್ತ ನಾಗೇಶ ಹೆಗಡೆ ತಿಳಿಸಿದರು.
ಗ್ರಾಮ ಸೇವಾ ಸಂಘವು ಗ್ರಾಮೋದ್ಯೋಗ ಉಳಿಸಿ ಆಂದೋಲನದ ಭಾಗವಾಗಿ ಕೆಂಗೇರಿ ಉಪನಗರದ ಹೊಯ್ಸಳ ವೃತ್ತದ ಬಳಿ ಹಮ್ಮಿಕೊಂಡಿರುವ ಕರಸ್ಥಲ ನಗರ ಸಂತೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
'ಗಾಂಧೀಜಿಯವರು ಸ್ವಚ್ಛತೆ ಹಾಗೂ ಗ್ರಾಮಗಳ ಮಹತ್ವವನ್ನು ಸಾರಿದ್ದರು. ಅದರ ಅರಿವು ಈಗ ಆಗುತ್ತಿದೆ. ನಮ್ಮೆಲ್ಲರ ಉಳಿವಿಗಾಗಿ ಗ್ರಾಮಗಳನ್ನು ನಾವೆಲ್ಲ ಉಳಿಸಬೇಕಿದೆ' ಎಂದರು.
ಕರಸ್ಥಲ ಸಂಚಾಲಕ ವಾಸುದೇವ್,' ಗ್ರಾಮೋದ್ಯೋಗ ಉಳಿಸಿ ಆಂದೋಲನದ ಅಂಗವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಗಳು 'ಗ್ರಾಹಕನಾಗಿ ಒಳಗೆ ಬಾ ಗ್ರಾಮೋದ್ಯೋಗ ಕಾರ್ಯಕರ್ತನಾಗಿ ಹೊರ ಬಾ' ಎಂಬ ಕರೆಯನ್ನು ನೀಡಲಿವೆ' ಎಂದರು.
ಚಿತ್ರನಟ ಕಿಶೋರ್, ರಂಗಕರ್ಮಿ ಪ್ರಸನ್ನ, ಕನ್ನಡ ಪ್ರಾಧ್ಯಾಪಕ ಎ.ಎಂ.ಶಿವಸ್ವಾಮಿ ಭಾಗವಹಿಸಿದ್ದರು.