ನಿತ್ಯ 10 ಸಾವಿರ ಪ್ರಕರಣ: ‘ನಗರದ 167 ಕಡೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತದೆ. ನಿತ್ಯವೂ 10 ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಪರಮೇಶ್ವರ ಹೇಳಿದರು. ‘ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ಶಿಸ್ತು ಕಡಿಮೆಯಾಗುತ್ತಿದೆ. ವರ್ಗಾವಣೆ ಮಾಡಿದ ಸ್ಥಳಕ್ಕೆ ಕೆಲ ಸಿಬ್ಬಂದಿ ಹೋಗದೆ ಅಶಿಸ್ತು ತೋರುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಹೇಳುವ ಕೆಲಸ ಮಾಡುವಲ್ಲಿ ಕೆಲ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸೇನೆ ಬಿಟ್ಟರೆ ಪೊಲೀಸ್ ಇಲಾಖೆಯೇ ಶಿಸ್ತಿಗೆ ಹೆಸರಾಗಿದ್ದು, ಅದನ್ನು ಕಾಪಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಪೊಲೀಸರಿಗೂ ಎಚ್ಚರಿಕೆ ನೀಡಿದರು.