ಬೆಂಗಳೂರು: ಕಾಲಜ್ಞಾನಿ ಕೈವಾರ ನಾರೇಯಣ ತಾತಯ್ಯ ಅವರ ಹೆಸರಿನಲ್ಲಿ ರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಯನ ಪೀಠ ರಚಿಸಬೇಕೆಂಬ ಕರ್ನಾಟಕ ಬಲಿಜ ಮಹಾಸಭಾ ಬೇಡಿಕೆಯನ್ನು ಮಾನ್ಯ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಂಬಂಧ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಬುಧವಾರ ಆದೇಶಿಸಿದ್ದಾರೆ.
ಸಂಸದ ಪಿ.ಸಿ. ಮೋಹನ್ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಕರ್ನಾಟಕ ಬಲಿಜ ಮಹಾಸಭಾ ಮುಖಂಡರ ನಿಯೋಗ, ಹಲವು ಬೇಡಿಕೆಗಳುಳ್ಳ ಮನವಿ ಪತ್ರ ಸಲ್ಲಿಸಿತು. ಕೈವಾರ ತಾತಯ್ಯ ಅವರ ಹೆಸರಿನಲ್ಲಿ ಅಧ್ಯಯನ ಪೀಠ ರಚನೆಗೆ ಆದೇಶ ಹೊರಡಿಸುವಂತೆ ತಕ್ಷಣವೇ ನಿರ್ದೇಶನ ನೀಡಿದರು.
‘ಮುಖ್ಯಮಂತ್ರಿಯವರು ಅಧ್ಯಯನ ಪೀಠ ರಚನೆಗೆ ಸಮ್ಮತಿಸಿರುವುದರ ಜತೆಗೆ ಬಲಿಜ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬಲಿಜ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 3–ಎ ಪಟ್ಟಿಯಿಂದ 2–ಎ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸುವಂತೆಯೂ ಬೇಡಿಕೆ ಸಲ್ಲಿಸಲಾಗಿದೆ. ಈ ಕುರಿತು ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಬೊಮ್ಮಾಯಿ ನೀಡಿದ್ದಾರೆ’ ಎಂದು ಮೋಹನ್ ತಿಳಿಸಿದ್ದಾರೆ.