ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಹ ಪ್ರಯಾಣಿಕರ ಲಗೇಜು ಕಳವು ಮಾಡಿದ್ದ ಆರೋಪದಡಿ ಸಾಕ್ಷಿ ರಾಥೋಡ್ (23) ಎಂಬುವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
‘ಲಗೇಜು ಕಳವಾದ ಬಗ್ಗೆ ಮೈಸೂರಿನ ಶ್ಯಾಮ್ ಶರ್ಮಾ ಎಂಬುವರು ದೂರು ನೀಡಿದ್ದರು. ಅದರನ್ವಯ ಆರೋಪಿ ಎನ್ನಲಾದ ಜೈಪುರದ ಸಾಕ್ಷಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ಶರ್ಮಾ ಅವರು ಕಳೆದ ನವೆಂಬರ್ 13ರಂದು ಜೈಪುರದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದರು. ನಿಲ್ದಾಣದಿಂದ ಹೊರಬರುತ್ತಿದ್ದ ವೇಳೆಯಲ್ಲಿ 50 ಗ್ರಾಂ ಚಿನ್ನಾಭರಣ ಹಾಗೂ ₹ 2.50 ಲಕ್ಷ ನಗದು ಇದ್ದ ಬ್ಯಾಗ್ ಕಳವಾಗಿತ್ತು. ಈ ಸಂಗತಿ ದೂರಿನಲ್ಲಿತ್ತು’ ಎಂದೂ ಮೂಲಗಳು ತಿಳಿಸಿವೆ.
‘ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಆರೋಪಿ, ವಿಮಾನ ನಿಲ್ದಾಣದಿಂದ ಹೊರ ಬರುವ ವೇಳೆಯಲ್ಲೇ ಲಗೇಜು ಕಳವು ಮಾಡಿದ್ದರು. ಕೆಲ ದಿನ ಬಿಟ್ಟು ವಾಪಸು ಜೈಪುರಕ್ಕೆ ಹೋಗಿದ್ದರು. ಇತ್ತೀಚೆಗೆ ಪುನಃ ನಗರಕ್ಕೆ ಬಂದಾಗ ಅವರನ್ನು ಸೆರೆ ಹಿಡಿಯಲಾಗಿದೆ’ ಎಂದೂ ಹೇಳಿವೆ.