ಬೆಂಗಳೂರು: ಕಳಪೆ ಮತ್ತು ನಕಲಿ ಬಿತ್ತನೆ ಬೀಜಗಳ ತಯಾರಿಸುವ ಮಾಫಿಯಾದ ಮೇಲೆ ಗದಾ ಪ್ರಹಾರಕ್ಕೆ ರಾಜ್ಯ ಕೃಷಿ ಇಲಾಖೆ ಸಿದ್ಧತೆ ನಡೆಸಿದೆ.
ಅದಕ್ಕೊಂದು ವಿನೂತನ ವಿಧಾನವನ್ನು ಕೃಷಿ ಇಲಾಖೆಯು ಜಿಕೆವಿಕೆ ಜತೆಗೂಡಿ ಅಭಿವೃದ್ಧಿಪಡಿಸಿದೆ. ಅದು ಬೇರೇನೂ ಅಲ್ಲ; ಸರ್ಕಾರ ವಿತರಿಸುವ ಬಿತ್ತನೆ ಬೀಜಗಳಿಗೆ ವಿವಿಧ ರೀತಿ ಬಣ್ಣಗಳನ್ನು ಲೇಪಿಸಲಾಗುತ್ತದೆ. ಇಂತಹ ವಿಧಾನ ಅಮೆರಿಕ ಮತ್ತು ಕೆನಡಾದಲ್ಲಿದೆ ಎಂದುಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ತಿಳಿಸಿದರು.
ಈ ಬಿತ್ತನೆ ಬೀಜಗಳಿಗೆ ಬಯೋ ಡೀಗ್ರೇಡೆಬಲ್ ಪಾಲಿಮರ್ ಲೇಪಿಸಲಾಗುತ್ತದೆ. ಹೆಚ್ಚು ಕಾಲ ಸಂಗ್ರಹಿಸಡಲು ಸಾಧ್ಯವಿದೆ, ಹುಳ ಹಿಡಿದು ಹಾಳಾಗುವುದಿಲ್ಲ. ಪಾಲಿಮರ್ ಭೂಮಿಯಲ್ಲಿ ಕರಗುತ್ತದೆ. ಈಗಾಗಲೇ ಜಿಕೆವಿಕೆ ಈ ಬೀಜಗಳನ್ನು ಭೂಮಿಯಲ್ಲಿ ಬಿತ್ತಿ ಪ್ರಯೋಗ ನಡೆಸಿದೆ. ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದೂ ಹೇಳಿದರು.
ಮುಂಬರುವ ವರ್ಷಗಳಲ್ಲಿ ಇದನ್ನು ರೈತರಿಗೆ ವಿತರಿಸುವ ಚಿಂತನೆ ಇದೆ. ಈಗ ಸೋಯಾ, ಕಡಲೆ ಮತ್ತು ಸೂರ್ಯಕಾಂತಿ ಬಿತ್ತನೆ ಬೀಜಗಳಿಗೆ ಬಯೋ ಡೀಗ್ರೇಡಬಲ್ ಪಾಲಿಮರ್ ಲೇಪಿಸಲಾಗಿದೆ. ಇದರಿಂದ ಮುಖ್ಯವಾಗಿ, ನಕಲಿ ಬೀಜ ಮತ್ತು ಕಳಪೆ ಬೀಜಗಳ ಹಾವಳಿಯನ್ನು ತಡೆಗಟ್ಟಲು ಸಾಧ್ಯ ಎಂದೂ ಅವರು ಹೇಳಿದರು.