ಬೆಂಗಳೂರು: ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಮನೆಗೆ ನುಗ್ಗಿರುವ ಆರೋಪಿಗಳು ಮಲಗುವ ಕೋಣೆಯ ಕಪಾಟಿನಲ್ಲಿಟ್ಟಿದ್ದ ನಗದು ಹಾಗೂ ಸುಮಾರು ₹50 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಂದ್ರಶೇಖರ್ ಅವರು ಠಾಣೆ ವ್ಯಾಪ್ತಿಯ ಕ್ಲಾಸಿಕ್ ಆರ್ಕೆಡ್ ಲೇಔಟ್ನಲ್ಲಿ ವಾಸವಿದ್ದರು. ಕುಟುಂಬದವರೆಲ್ಲಾ ಶುಕ್ರವಾರ ಧರ್ಮಸ್ಥಳಕ್ಕೆ ಹೋಗಿದ್ದರು. ಅಲ್ಲಿಂದ ಬಂದು ನೋಡಿದಾಗ ಚಿನ್ನಾಭರಣ ಹಾಗೂ ನಗದು ಕಳವು ಆಗಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ನೇಪಾಳದ ವ್ಯಕ್ತಿಯೊಬ್ಬರು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆತನ ಪತ್ನಿ ಮನೆಕೆಲಸ ಮಾಡಿಕೊಂಡಿದ್ದಳು. ಕಳವು ನಡೆದ ನಂತರ ಇಬ್ಬರೂ ನಾಪತ್ತೆಯಾಗಿದ್ದಾರೆ. ಅವರೇ ಕೃತ್ಯ ನಡೆಸಿರುವ ಶಂಕೆ ಇದೆ. ಕಳ್ಳರು ಬೀಗ ಮುರಿದು ಮನೆಯೊಳಗೆ ನುಗ್ಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.