ಬೆಂಗಳೂರು: ‘ರಾತ್ರಿ ರಾಜಕೀಯದಿಂದ ಲಕ್ಷ್ಮಿ ಹೆಬ್ಬಾಳಕರ ಶಾಸಕಿಯಾಗಿದ್ದಾರೆ’ ಎಂಬ ಹೇಳಿಕೆ ನೀಡಿರುವ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ವಿರುದ್ಧ ಮಹಿಳಾ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಆನಂದರಾವ್ ವೃತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಸಂಜಯ ಪಾಟೀಲ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಸಂಜಯ ಪಾಟೀಲ ಮತ್ತು ಬಿಜೆಪಿ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಮೇಯರ್ ಜಿ. ಪದ್ಮಾವತಿ, ‘ಬಿಜೆಪಿ ನಾಯಕರು ದೇಶಭಕ್ತಿ, ಸಂಸ್ಕೃತಿ ಹೆಸರಿನಲ್ಲಿ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ, ಮಹಿಳೆಯರ ಬಗ್ಗೆ ಅವರಿಗೆ ಎಳ್ಳಷ್ಟೂ ಗೌರವವಿಲ್ಲ. ಸಂಜಯ ಪಾಟೀಲ ಬಳಸಿರುವ ಕೀಳುಮಟ್ಟದ ಭಾಷೆಯೇ ಇದಕ್ಕೆ ಸಾಕ್ಷಿ’ ಎಂದರು.
ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಿಮಲಾ ವೆಂಕಟ್, ಮುಖಂಡರಾದ ಉಮಾ ಬಾಯಿ, ಸಲ್ಮಾ ತಾಜ್, ಪಲ್ಲವಿ ಪ್ರಭು ಮತ್ತಿತರರು ಇದ್ದರು.
ಯುವ ಕಾಂಗ್ರೆಸ್ನಿಂದಲೂ ಪ್ರತಿಭಟನೆ: ಅದೇ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಸಂಜಯ ಪಾಟೀಲ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆದು, ನಂತರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್. ಮನೋಹರ್, ವಿ. ಶಂಕರ್, ವಿಜಯ್ ಮುಳುಗುಂದ, ಜಿ. ಜನಾರ್ದನ್, ಎ. ಆನಂದ್, ಜಿ. ಜಯಸಿಂಹ, ಎ. ಸಲೀಂ, ಆದಿತ್ಯ ಪ್ರಕಾಶ್, ಪುಟ್ಟರಾಜು, ಚಂದ್ರಶೇಖರ್, ತೇಜಸ್, ಅಶ್ವತ್ಥ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.