ಬೆಂಗಳೂರು: ಕೊರೊನಾ ಸೋಂಕು ತಡೆಗಾಗಿ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಕೆಲ ಸಾರ್ವಜನಿಕರ ವಿರೋಧದಿಂದಾಗಿ ಪೊಲೀಸರು ಲಾಠಿ ಬಿಟ್ಟು ವಾಹನ ಜಪ್ತಿಯನ್ನಷ್ಟೇ ಮಾಡುತ್ತಿದ್ದಾರೆ.
ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ ಹಾಗೂ ಹಲವು ಕಡೆ ಮಂಗಳವಾರ ಬೆಳಿಗ್ಗೆ ಖರೀದಿ ಜೋರಾಗಿತ್ತು.
ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿತ್ತು. ಆದರೆ, ಸೋಮವಾರ ವಾಹನಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದವರನ್ನು ತಡೆದು ಪೊಲೀಸರು ಲಾಠಿಯಿಂದ ಹೊಡೆದಿದ್ದರು.
ಆಟೊ,ಕ್ಯಾಬ್ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಲಾಠಿಯಿಂದ ಥಳಿಸಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, 'ಲಾಠಿಯಿಂದ ಹೊಡೆಯುವ ಅಧಿಕಾರ ನಿಮಗೆ ಕೊಟ್ಟವರು ಯಾರು?' ಎಂದು ಪ್ರಶ್ನಿಸಿದ್ದರು.
ಅದೇ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, 'ಅಗತ್ಯ ವಸ್ತುಗಳನ್ನು ತರಲು ಜನರು ವಾಹನದಲ್ಲಿ ಹೋಗಬಹುದು' ಎಂದಿದ್ದರು. ಕಮಲ್ ಪಂತ್, 'ಸುಖಾಸುಮ್ಮನೇ ಬಲಪ್ರಯೋಗ ಮಾಡಬೇಡಿ' ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು.
ಹೀಗಾಗಿ, ಮಂಗಳವಾರ ಲಾಠಿ ಬೀಸದೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ.
ಮಾರುಕಟ್ಟೆಗೆ ಬಂದು ಹೋಗುವ ಹಾಗೂ ಪ್ರಮುಖ ರಸ್ತೆಗಳಲ್ಲಿ ಓಡಾಡುವವರನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸೂಕ್ತ ಕಾರಣ ನೀಡದವರ ವಾಹನಗಳನನ್ನು ಜಪ್ತಿ ಮಾಡುತ್ತಿದ್ದಾರೆ.
ಬೆಳಿಗ್ಗೆ 10ರ ನಂತರ ನಗರದಲ್ಲಿ ವಾಹನಗಳ ಪರಿಶೀಲನೆ ಬಿಗಿಯಾಗಿದೆ. ಪ್ರತಿಯೊಂದು ಚೆಕ್ಪೋಸ್ಟ್ಗಳಲ್ಲೂ ಪೊಲೀಸರು ವಾಹನಗಳನ್ನು ಪರಿಶೀಲಿಸುತ್ತಿದ್ದಾರೆ.