ಬೆಂಗಳೂರು: ಇಲ್ಲಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಿ ಹಿಡಿದು ಜನರಿಂದ ಪ್ರತ್ಯೇಕಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದಾರೆ.
ಸೋಮವಾರ, ಮಂಗಳವಾರ ಪಾದರಾಯನಪುರದಲ್ಲಿ 112 ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕವಾಗಿ ಇಡಲು ಸಿಸಿಬಿ ಅಧಿಕಾರಿಗಳು ಸೇರಿದಂತೆ ದೊಡ್ಡ ಪೊಲೀಸರ ತಂಡವೇ ಹೋಗಿತ್ತು. ಆ ಸಮಯದಲ್ಲಿ ಅಲ್ಲಿ ದೊಡ್ಡ ಗಲಾಟೆಯೇ ನಡೆದಿತ್ತು.
ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗಿವಹಿಸಿದ್ದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ. ಡಿಸಿಪಿಗಳಾದ ಅನುಚೇತ್, ರವಿಕುಮಾರ್ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ನೆಗೆಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಎಸಿಪಿ ಒಬ್ಬರೂ ಸೇರಿದಂತೆ 27 ಮಂದಿ ಪೊಲೀಸ್ ಸಿಬ್ಬಂದಿ ಸೋಂಕಿತರ ಮನೆಗಳಿಗೆ ನುಗ್ಗಿ ಅವರನ್ನು ಎಳೆದು ತಂದಿದ್ದರು. ಈ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ವರದಿ ಬರುವುದು ಬಾಕಿ ಇದೆ ಎಂದೂ ಮೂಲಗಳು ಹೇಳಿವೆ.
ಪಾದರಾಯನಪುರದಲ್ಲಿ ಸೋಮವಾರ ರಾತ್ರಿ 80 ಮತ್ತು ಮಂಗಳವಾರ 32 ಮಂದಿಯನ್ನು ಹಿಡಿದು ತಂದು ಸಿಸಿಬಿಯಲ್ಲಿ ಇಡಲಾಗಿತ್ತು. ಬಳಿಕ ಅವರನ್ನು ಆಡುಗೋಡಿಯಲ್ಲಿರುವ ಮಂಗಳ ಕಲ್ಯಾಣ ಮಂಟಪಕ್ಕೆ ಕಳುಹಿಸಲಾಗಿತ್ತು. ಇನ್ನೂ 17 ಮಂದಿ ತಲೆಮರೆಸಿಕೊಂಡಿದ್ದಾರೆ. ಅವರನ್ನು ಹಿಡಿಯುವ ಪ್ರಯತ್ನವನ್ನು ಇಲಾಖೆ ಮುಂದುವರಿಸಿಲ್ಲ ಎಂದೂ ಗೊತ್ತಾಗಿದೆ.
ಸೋಂಕಿತರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಯಾವುದೇ ಸಿಬ್ಬಂದಿಗೆ ಪಾಸಿಟಿವ್ ಬಂದ ಪಕ್ಷದಲ್ಲಿ ಸಿಸಿಬಿಯ ಎಲ್ಲ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದಾಗಿ ಮೂಲಗಳು ತಿಳಿಸಿವೆ.