ಬೆಂಗಳೂರು: ‘ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆಯ (ಸಿಪಿಆರ್ಐ) ಮಹಾನಿರ್ದೇಶಕರಾಗಿದ್ದಎನ್.ಮುರುಗೇಸನ್ ಅವರನ್ನು ಇದೇ 31ರವರೆಗೆ ಸಾಂಕೇತಿಕವಾಗಿ ಅದೇ ಹುದ್ದೆಯಲ್ಲಿ ಮುಂದುವರಿಸಿ’ ಎಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತಂತೆ ಮುರುಗೇಸನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.
‘ಅರ್ಜಿದಾರರಿಗೆ ಕಾನೂನು ಬದ್ಧವಾಗಿ ದೊರೆಯಬೇಕಾದ ಭತ್ಯೆ ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು’ ಎಂದು ಆದೇಶಿಸಿದೆ.
‘ನಿಯಮದಂತೆ ಸೇವೆಯಲ್ಲಿ ಮುಂದುವರಿಸಿದ್ದರೆ ನಾನು 2019ರ ಮೇ 31ರಂದು ನಿವೃತ್ತಿಯಾಗುತ್ತಿದ್ದೆ. ಆದರೆ, ಕಾನೂನು ಬಾಹಿರವಾಗಿ 2015ರ ಮಾರ್ಚ್ 20ರಂದು ನನ್ನನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. ಏಕಸದಸ್ಯ ನ್ಯಾಯಪೀಠ ಈ ರಿಟ್ ಅರ್ಜಿ ವಜಾ ಮಾಡಿತ್ತು.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.