ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ ಅನಾಥ ಶವಸಂಸ್ಕಾರ ಮಾಡಿದ್ದ ಮಹದೇವ್ ಇನ್ನಿಲ್ಲ

Last Updated 17 ಜುಲೈ 2022, 3:15 IST
ಅಕ್ಷರ ಗಾತ್ರ

ಬೆಂಗಳೂರು: ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದ ಎಂ. ಮಹದೇವ್ (59) ಅವರು ಅನಾರೋಗ್ಯದಿಂದಾಗಿ ಗುರುವಾರ (ಜುಲೈ 14) ನಿಧನರಾದರು.

ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದ ಮಹದೇವ್ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹದೇವ್ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

9ನೇ ವಯಸ್ಸಿನಿಂದಲೇ ಅನಾಥ ಶವಗಳ ಅಂತ್ಯ ಸಂಸ್ಕಾರ ನೆರವೇರಿಸಲಾರಂಭಿಸಿದ್ದ ಮಹದೇವ್ ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯೇ ಮನೆಯಂತಾಗಿತ್ತು. ಅಪಘಾತ, ಆತ್ಮಹತ್ಯೆ ಹೀಗೆ ಹಲವು ಕಾರಣಗಳಿಂದ ಮೃತಪಡುತ್ತಿದ್ದ ಅನಾಥ ಶವಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಕೊಂಡೊಯ್ಯುತ್ತಿದ್ದ ಮಹದೇವ, ಸಂಬಂಧಿಕರ ಸ್ಥಾನದಲ್ಲಿ ನಿಂತು ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದರು. ಪೊಲೀಸರು ಹಾಗೂ ವೈದ್ಯರು ಮಹದೇವ ಅವರನ್ನು ’ಅನಾಥ ಶವಗಳ ತ್ರಿವಿಕ್ರಮ'ಎಂದೇ ಕರೆಯುತ್ತಿದ್ದರು.

ಶವಗಳನ್ನು ಆಟೊದಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದ ಮಹದೇವ್ ಅವರಿಗೆ ಐಎಎಸ್ ಅಧಿಕಾರಿ ಮದನ್‌ ಗೋಪಾಲ್, ಒಮ್ನಿ ವಾಹನ ನೀಡಿದ್ದರು. ನಂತರ, ಅದರಲ್ಲೇ ಶವ ಸಾಗಣೆ ಮುಂದುವರಿದಿತ್ತು. 51 ವರ್ಷಗಳ ನಿರಂತರ ಕೆಲಸದಲ್ಲಿ ಮಹದೇವ ಅವರು 1 ಲಕ್ಷಕ್ಕಿಂತ ಹೆಚ್ಚು ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೇಳುತ್ತಾರೆ.

ಮಹದೇವ್ ಅವರ ಕೆಲಸಕ್ಕೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಶಸ್ತಿ ಲಭಿಸಿತ್ತು.

ಮಕ್ಕಳಿಂದ ಕೆಲಸ ಮುಂದುವರಿಕೆ: ಮಹದೇವ್ ಅವರ ಕೆಲಸವನ್ನು ಮಕ್ಕಳಾದ ಪ್ರವೀಣ್ ಹಾಗೂ ಕಿರಣ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

‘1 ತಿಂಗಳಿನಿಂದ ತಂದೆಗೆ ಹುಷಾರು ಇರಲಿಲ್ಲ. ಆಸ್ಪತ್ರೆಯಲ್ಲಿ ಇರುವಾ ಗಲೂ ಅವರು ಅನಾಥ ಶವಗಳ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದರು. ನಾನು ಹಾಗೂ ಅಣ್ಣ ಸೇರಿಕೊಂಡು ಅನಾಥ ಶವಗಳಸಂಸ್ಕಾರ ಮಾಡುತ್ತಿದ್ದೇವೆ. ತಂದೆಯ ಕೆಲಸ ವನ್ನು ಮುಂದುವರಿಸಿದರೆ, ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ’ ಎಂದು ಮಗ ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT