ಬೆಂಗಳೂರು: ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿ ಈಶ್ವರಯ್ಯ (32) ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿ ಸಂಬಂಧಿಕರು ದೂರು ನೀಡಿದ್ದಾರೆ. ಹವಾನಿಯಂತ್ರಿತ ಸಾಧನಗಳ ನಿರ್ವಹಣಾ ಗುತ್ತಿಗೆದಾರರಾಗಿದ್ದ ಈಶ್ವರಯ್ಯ, ಪತ್ನಿ ಹಾಗೂ ಮಕ್ಕಳ ಜೊತೆಯಲ್ಲಿ ವಾಸವಿದ್ದರು.
‘ಗರುಡಾಚಾರ್ಯ ಪಾಳ್ಯದ ನಿವಾಸಿ ಲೋಕೇಶ್ ಹಾಗೂ ಅವರ ಕಡೆಯವರು, ಸಾಲದ ವಿಚಾರವಾಗಿ ಸಹೋದರ ಈಶ್ವರಯ್ಯ ಜೊತೆ ಜಗಳ ಮಾಡಿ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ಬೀರೆ ಬ್ರಹ್ಮಯ್ಯ ಎಂಬುವರು ದೂರು ನೀಡಿದ್ದಾರೆ.
ಲೋಕೇಶ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
ಸಾಲ ಕೇಳಿದ್ದಕ್ಕೆ ಜಗಳ: ‘ಈಶ್ವರಯ್ಯ ಅವರು ಲೋಕೇಶ್ ಅವರಿಗೆ ಕೈ ಸಾಲ ನೀಡಿದ್ದರು. ಹಲವು ದಿನವಾದರೂ ಸಾಲ ವಾಪಸು ನೀಡಿರಲಿಲ್ಲ. ಅದನ್ನು ಕೇಳಲೆಂದು ಈಶ್ವರಯ್ಯ, ಇದೇ 24ರಂದು ಬೆಳಿಗ್ಗೆ ಲೋಕೇಶ್ ಮನೆಗೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲೇ ಈಶ್ವರಯ್ಯ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಸ್ಥಳೀಯರೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ವಿವರಿಸಿದರು.
‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ನಂತರವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಅವರು ಹೇಳಿದರು.