ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತನ್ನ ಮೂರು ವರ್ಷದ ಮಗಳನ್ನು ತಾಯಿ ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಧಾ (26) ಮಗಳನ್ನು ಕೊಲೆ ಮಾಡಿದ ತಾಯಿ. ವಿನುತಾ ಕೊಲೆಯಾದ ಮಗಳು.
ತಿಂಡಿ ಖರೀದಿಸಲು ಹೊರಗಡೆ ತೆರಳಿದ್ದಾಗ ಮಗಳು ಕಾಣೆಯಾಗಿದ್ದಾಳೆ ಎಂದು ಸುಧಾ ದಂಪತಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು. ಆದರೆ,ಬುಧವಾರ ಬೆಳಿಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
‘ಸುಧಾಳ ಹೇಳಿಕೆಗಳಿಂದ ಅನುಮಾನಗೊಂಡ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು, ತಿಂಡಿ ತಿನ್ನಲು ತೆರಳಿದ್ದ ಜಾಗ ತೋರಿಸುವಂತೆ ಹೇಳಿದ್ದರು. ಇದರಿಂದ ಭಯಗೊಂಡ ಸುಧಾ, ‘ಮಗಳನ್ನು ವೇಲ್ನಿಂದ ಕುತ್ತಿಗೆ ಬಿಗಿದು, ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಈರಣ್ಣ ಹಾಗೂ ಆರೋಪಿ ಸುಧಾ ದಂಪತಿ ಮಲ್ಲತ್ತಹಳ್ಳಿಯ ಮನೆಯೊಂದರಲ್ಲಿ ವಾಸವಿದ್ದರು. ಇಬ್ಬರೂ ಕೆಲಸಕ್ಕೆ ತೆರಳುತ್ತಿದ್ದು, ಊಟಕ್ಕೆ ಮನೆಗೆ ಬಂದು ಹೋಗುತ್ತಿದ್ದರು. ಸುಧಾಮಂಗಳವಾರವೂ ಊಟಕ್ಕೆಂದು ಮನೆಗೆ ಬಂದು ಟಿ.ವಿ ವೀಕ್ಷಿಸುತ್ತಿದ್ದರು. ನಂತರ ಮನೆಗೆ ಬಂದಿದ್ದ ಪತಿ ಈರಣ್ಣ ಚಾನೆಲ್ ಬದಲಿಸಿದ್ದರು. ಈ ವಿಚಾರಕ್ಕೆ ದಂಪತಿ ಜಗಳವಾಡಿಕೊಂಡಿದ್ದರು’.
‘ಯಾವಾಗಲೂ ನ್ಯೂಸ್ ಚಾನೆಲ್ ನೋಡುತ್ತೀಯಾ, ಹೀಗೆ ಮಾಡುವುದಾದರೆ ಮನೆಗೆ ಬರಬೇಡ’ ಎಂದು ಸುಧಾ ಪತಿಯನ್ನು ಬೈದಿದ್ದಳು. ಈ ವೇಳೆ ವಿನುತಾ ತನ್ನ ತಂದೆಯ ಪರ ಮಾತನಾಡಿದ್ದಳು. ತಾಯಿಯನ್ನು ‘ಹುಚ್ಚಿ’ ಎಂದೂ ಕರೆದಿದ್ದಳು. ಇದರಿಂದ ಕೋಪಗೊಂಡಿದ್ದ ತಾಯಿ ಸುಧಾ, ಮಗಳನ್ನು ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾಳೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಹೊರಗೆ ಹೋಗಿದ್ದ ತಾಯಿ–ಮಗಳು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಆತಂಕಗೊಂಡ ಈರಣ್ಣ ಪತ್ನಿಗೆ ಕರೆ ಮಾಡಿದಾಗ, ಮಗಳು ತಿಂಡಿ ತಿನ್ನುತ್ತಿದ್ದ ವೇಳೆ ಕಾಣೆಯಾಗಿದ್ದಾಳೆ ಎಂದು ಸುಳ್ಳು ಹೇಳಿದ್ದಳು. ಬಳಿಕ ದಂಪತಿ ಜ್ಞಾನಭಾರತಿ ಠಾಣೆಗೆ ತೆರಳಿ ದೂರು ನೀಡಿದ್ದರು’ ಎಂದರು.