ಬೆಂಗಳೂರು: ಬಾಗಲೂರು ಠಾಣೆ ವ್ಯಾಪ್ತಿಯಲ್ಲಿ ಉಮಾಶಂಕರ್ ಅಲಿಯಾಸ್ ದೊಂಗ ಎಂಬುವರನ್ನು ಕೊಲೆ ಮಾಡಿ ಪರಾರಿಯಾಗಿದ್ದರವಿ ಅಲಿಯಾಸ್ ಕ್ಯಾಮರೋನ್ ರವಿ ಎಂಬಾತನನ್ನು ಕಾಲಿಗೆ ಗುಂಡು ಹಾರಿಸಿ ಶುಕ್ರವಾರ ಪೊಲೀಸರು ಸೆರೆ ಹಿಡಿದಿದ್ದಾರೆ.
ಯಲಹಂಕದ ಕಟ್ಟಿಗೇನಹಳ್ಳಿ ನಿವಾಸಿಯಾಗಿದ್ದ ಉಮಾಶಂಕರ್ ಅವರನ್ನು ಮಾ. 10ರಂದು ರವಿ ಹಾಗೂ ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಬಾಗಲೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
‘ಶುಕ್ರವಾರ ನಸುಕಿನಲ್ಲಿ ಕೋಗಿಲು ಕ್ರಾಸ್ ಬಳಿ ರವಿ ಇದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇನ್ಸ್ಪೆಕ್ಟರ್ ಬಿ. ರಾಮಮೂರ್ತಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ ಆರೋಪಿಯನ್ನು ಹಿಡಿಯಲು ಮುಂದಾಗಿತ್ತು. ಪೊಲೀಸರ ಮೇಲೆಯೇ ರವಿ ಹಲ್ಲೆ ಮಾಡಿದ್ದ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ಆರೋಪಿಗೆ ಪಿಸ್ತೂಲ್ ತೋರಿಸಿದ್ದ ಇನ್ಸ್ಪೆಕ್ಟರ್ ಶರಣಾಗುವಂತೆ ಹೇಳಿದ್ದರು. ಅಷ್ಟಾದರೂ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಇನ್ಸ್ಪೆಕ್ಟರ್ ಆತನ ಕಾಲಿಗೆ ಗುಂಡು ಹೊಡೆದರು. ಎಡಗಾಲಿಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.
ಬೈಕ್ ಹಿಂಬಾಲಿಸಿ ಹತ್ಯೆ ಮಾಡಿದ್ದರು: ‘ಉಮಾಶಂಕರ್ ಹಾಗೂ ಸ್ನೇಹಿತ ಭರತ್ ಎಂಬುವರು ಬೈಕ್ನಲ್ಲಿ ಶ್ರೀನಿವಾಸಪುರದಿಂದ ಮಿಟಗಾನಹಳ್ಳಿ ಕಡೆಗೆ ತೆರಳುತ್ತಿದ್ದರು. ಅದೇ ವೇಳೆಯೇ ಆರೋಪಿಗಳು ಕಾರಿನಲ್ಲಿ ಬಂದು ಬೈಕ್ಗೆ ಡಿಕ್ಕಿ ಹೊಡೆಸಿದ್ದರು. ರಸ್ತೆಯಲ್ಲಿ ಬಿದ್ದ ಉಮಾಶಂಕರ್ ಹಾಗೂ ಭರತ್ ಮೇಲೆ ಮಾರಕಾಸ್ತ್ರಗಳಿಂದ ಹೊಡೆದಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ರಸ್ತೆಯಲ್ಲಿ ನರಳಾಡುತ್ತಿದ್ದ ಇಬ್ಬರನ್ನೂ ಸಮೀಪದ ಕೆ.ಕೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಉಮಾಶಂಕರ್ ಅಸುನೀಗಿದ್ದರು. ಭರತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’
‘ಆರಂಭದಲ್ಲಿ ಇದೊಂದು ಅಪಘಾತವೆಂದು ಹೇಳಲಾಗಿತ್ತು. ಮೃತದೇಹದ ಮೇಲಿದ್ದ ಗಾಯದ ಗುರುತುಗಳಿಂದ ಇದೊಂದು ಕೊಲೆ ಎಂಬುದು ಗೊತ್ತಾಗಿತ್ತು. ಉಮಾಶಂಕರ್ ಪತ್ನಿ ಕೆ. ಧನಲಕ್ಷ್ಮಿ ದೂರು ನೀಡಿದ್ದರು’ ಎಂದರು.
‘ಪ್ರಕರಣದಲ್ಲಿ ಭಾಗಿಯಾಗಿದ್ದ ಮಹೇಂದ್ರ ಹಾಗೂ ಮಣಿ ಎಂಬಾತನನ್ನೂ ಈಗಾಗಲೇ ಬಂಧಿಸಲಾಗಿದೆ. ಇದೀಗ ಕಾಲಿಗೆ ಗುಂಡು ಹೊಡೆದು ರವಿಯನ್ನು ಸೆರೆ ಹಿಡಿಯ ಲಾಗಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.
‘ರೌಡಿ ಭರತ್ ಕೊಲೆಗೆ ಸೇಡು
‘ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ತಿಂಗಳ ಹಿಂದಷ್ಟೇ ರೌಡಿ ಭರತ್ (30) ಎಂಬಾತನ ಕೊಲೆ ಆಗಿತ್ತು. ಪ್ರಕರಣದಲ್ಲಿಉಮಾಶಂಕರ್ ಭಾಗಿಯಾಗಿರುವ ಅನುಮಾನವಿತ್ತು. ಹೀಗಾಗಿಯೇ ಭರತ್ನ ಸಹಚರರಾದ ರವಿ ಹಾಗೂ ಬೆಂಬಲಿಗರು, ಸಂಚು ರೂಪಿಸಿ ಅವರನ್ನು
ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.