ದಾಬಸ್ಪೇಟೆ: ಸೋಂಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದಿವೆ. ಹುಲ್ಲಿನ ಬಣವೆಗಳು ಉರುಳಿವೆ. ಮನೆಗಳ ಚಾವಣಿ ಹಾರಿ ಹೋಗಿವೆ.
ಸಂಜೆ 5.30ರಿಂದ 6.30ರವರೆಗೆ ಮಳೆ ಸುರಿಯಿತು. ಮಳೆಯ ಜೊತೆಗೆ ಗಾಳಿಯು ತೀವ್ರವಾಗಿದ್ದರಿಂದ ಮರಗಳು ಮುರಿದು ಬಿದ್ದವು. ಮಾವಿನ ಕಾಯಿ, ಹಲಸಿನ ಕಾಯಿ ನೆಲಕ್ಕುರುಳಿದವು.
ಗಾಳಿಯ ವೇಗಕ್ಕೆ ತಿಮ್ಮಪ್ಪನ ಪಾಳ್ಯದ ರೈತ ಧನಂಜಯ ಅವರ ಹುಣಸೆ ಮರ, ಹಲಸಿನ ಮರ ನೆಲಕ್ಕೆ ಉರುಳಿದೆ. ಚನ್ನೋಹಳ್ಳಿಯ ಮೂರ್ತಿ, ರಾಮಯ್ಯ ಅವರ ದನದ ಕೊಟ್ಟಿಗೆಯ ಚಾವಣೆ ಹಾರಿ ಹೋಗಿವೆ. ತ್ಯಾಗರಾಜು ಅವರ ಆಲದ ಮರ ಬಿದ್ದಿದೆ.
ಆರು ತಿಂಗಳಿಂದ ಮಳೆಯಿಲ್ಲದೆ ಕಾದ ಭೂಮಿಗೆ ಈ ಮಳೆಯ ಸಿಂಚನ ತಂಪೆರೆಯಿತು. ರೈತರ ಮೊಗದಲ್ಲಿ ಸಂತಸವನ್ನು ಮೂಡಿಸಿತು.